Publish Date: Sat, 15 Jan 2022 (16:36 IST)
Updated Date: Sat, 15 Jan 2022 (16:41 IST)
ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಉತ್ತರ ಕರ್ನಾಟಕದ ಮೂರನೇ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿದೆ. ಬೆಳಗಾವಿ ಮತ್ತು ಕಲಬುರಗಿ ಬಳಿಕ ಹುಬ್ಬಳ್ಳಿಯಲ್ಲಿ ತರಬೇತಿ ಶಾಲೆ ಆರಂಭವಾಗಲಿದೆ.
ಕರ್ನಾಟಕದ ಹಳೆಯ ವಿಮಾನ ನಿಲ್ದಾನಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವು ಒಂದಾಗಿದೆ. ರಸ್ತೆ ವೇ ವಿಸ್ತರಣೆ ಮಾಡಿ, ಹೊಸ ಟರ್ಮಿನಲ್ ಕಟ್ಟಡ ನಿರ್ಮಿಸಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಗೆ ಸೇರ್ಪಡೆ ಮಾಡಲಾಗಿದೆ.
ವೈಮಾನಿಕ ತರಬೇತಿ ಶಾಲೆಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲು ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ ಪೈಲೆಟ್ ತರಬೇತಿ ಪಡೆಯಲು ಉತ್ತರ ಕರ್ನಾಟಕ ಭಾಗದ ಯುವಕರು ಮುಂಬೈ, ಹೈದರಾಬಾದ್, ಬೆಂಗಳೂರು ನಗರಕ್ಕೆ ಹೋಗುವುದು ತಪ್ಪಲಿದೆ.ವೈಮಾನಿಕ ತರಬೇತಿ ಶಾಲೆ ಆರಂಭಿಸಲು ಬಹಳ ಬೇಡಿಕೆ ಇತ್ತು. ಕಳೆದ ವರ್ಷ ರಾಜ್ಯದಲ್ಲಿ 5 ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಈ ಕುರಿತು ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಹ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು.