Publish Date: Sat, 05 Oct 2024 (18:52 IST)
Updated Date: Sat, 05 Oct 2024 (18:53 IST)
ಚಿಕ್ಕಮಗಳೂರು: ಮುಖ್ಯಮಂತ್ರಿ ಅವರಿಗೆ ಕಾನೂನು-ಸಂವಿಧಾನದ ಬಗ್ಗೆ ಭಯವಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು ಸಿದ್ದರಾಮಯ್ಯಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟಾಂಗ್ ಕೊಟ್ಟರು.
ಚಿಕ್ಕಮಗಳೂರಿನ ಸೆಂಟ್ರಲ್ ಲೈಬ್ರರಿ ಬಳಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಹಿಂದೆಲ್ಲ ರಾಕ್ಷಸರು ತಾವು ಯಾರಿಗೂ ಹೆದರಲ್ಲ ಎಂದು ಹೇಳುತ್ತಿದ್ದರು. ಜನ, ಸಂವಿಧಾನ, ಕಾನೂನು, ನ್ಯಾಯಾಲಯಕ್ಕೆ ಹೆದರದವರನ್ನು ನಾವು ಏನೆಂದು ಅಂದುಕೊಳ್ಳಬೇಕು ವ್ಯಂಗ್ಯ ಮಾಡಿದರು
ರಾಯಚೂರಿನ ಸಮಾವೇಶದ ಕುರಿತು ಮಾತನಾಡಿ, ಅಧಿಕಾರ-ಹಣ ಉಪಯೋಗಿಸಿಕೊಂಡು ಯಾವ ಸಮಾವೇಶ ಬೇಕಾದರೂ ಮಾಡಬಹುದು. ಆದರೆ, ಸಮಾವೇಶಗಳ ಮೂಲಕ ಭ್ರಷ್ಟಾಚಾರ ಮುಚ್ಚಿ ಹಾಕಲು ಸಾಧ್ಯವಿಲ್ವಲ್ಲ ಎಂದು ವಾಗ್ದಾಳಿ ನಡೆಸಿದರು.
ಜಾತಿ ಜನಗಣತಿ ವಿಚಾರವಾಗಿ ಪ್ರತಿಕ್ರಿಯಿಸಿ, ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮುಂದುವರಿದರೆ ಸಮಸ್ಯೆ ಇಲ್ಲ. ಆದರೆ, ಸಮಾಜ ಒಡೆಯಲು, ಜಾತಿ ಎತ್ತಿಕಟ್ಟಲು, ರಾಜಕೀಯ ಮಾಡಿದ್ರೆ ಮಾತ್ರ ಯಾರೂ ಕ್ಷಮಿಸಲ್ಲ ಎಂದರು.