Publish Date: Thu, 06 Dec 2018 (19:16 IST)
Updated Date: Thu, 06 Dec 2018 (19:18 IST)
ಹುಲಿ ಹಿಡಿಯಲು ಕಾಯಾಚರಣೆಗೆ ಬಂದಿದ್ದ ಆನೆಯೇ ಕಾಡಿನೊಳಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಬಳಿಯ ಅಂತರಸಂತೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ತಾಲ್ಲೂಕಿನ ಅಂತರಸಂತೆ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಹುಲಿ, ಗ್ರಾಮದ ಹಸುಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.
ಅರಣ್ಯ ಇಲಾಖೆಯು ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಯಾಚರಣೆಗಾಗಿ ದಸರಾ ಆನೆ ಅರ್ಜುನ ಜೊತೆ ನಾಲ್ಕು ಆನೆಗಳು ಬಂದಿದ್ದವು. ಈ ನಾಲ್ಕು ಆನೆಗಳಲ್ಲಿ ಅಶೋಕ ಎಂಬ ಆನೆ ಕಾರ್ಯಾಚರಣೆ ವೇಳೆ ಪಟಾಕಿ ಶಬ್ದಕ್ಕೆ ಬೆದರಿ ಮಾವುತನನ್ನು ಕೆಳಗೆ ಬೀಳಿಸಿ ಕಾಡಿನೊಳಗೆ ನಾಪತ್ತೆಯಾಗಿದೆ.
ಸಣ್ಣಪುಟ್ಟ ಗಾಯಗಳಿಂದ ಮಾವುತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ ಅರಣ್ಯ ಇಲಾಖೆಯೂ ಹುಲಿ ಕಾರ್ಯಾಚರಣೆ ನಿಲ್ಲಿಸಿ ಕಾಡಿನೊಳಗೆ ತಪ್ಪಿಸಿ ಕೊಂಡಿರುವ ಅಶೋಕ ಆನೆ ಹುಡುಕುವ ಕಾರ್ಯಚರಣೆ ಪ್ರಾರಂಭಿಸಿದೆ.