Publish Date: Sun, 22 Mar 2020 (17:01 IST)
Updated Date: Sun, 22 Mar 2020 (17:03 IST)
ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಗಳ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರಿಗೂ ಸರಕಾರ ರಜೆ ಘೋಷಣೆ ಮಾಡಿದೆ.
ಮಾರ್ಚ್ 31 ರ ತನಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರಿಗೆ ರಜೆ ಘೋಷಣೆ ಮಾಡಿ ಸರಕಾರ ಆದೇಶವನ್ನು ಹೊರಡಿಸಿದೆ. ಈ ಹಿಂದೆ ವಿದ್ಯಾರ್ಥಿಗಳಿಗೆ ಮಾತ್ರ ರಜೆ ನೀಡಿ ಶಿಕ್ಷಕರು ಶಾಲೆಗೆ ಬರಬೇಕೆಂದು ಸರಕಾರ ತಿಳಿಸಿತ್ತು. ಇದೀಗ ಶಿಕ್ಷಕರಿಗೂ ರಜೆಯನ್ನು ಸರಕಾರ ನೀಡಿದೆ.
ಮಾರ್ಚ್ 31ರವರೆಗೆ ಮನೆಯಿಂದಲೇ ಶಾಲಾ ಕೆಲಸ ಮಾಡಬೇಕು. ಶಿಕ್ಷಕರು ಸೇರಿದಂತೆ ಸಿಬ್ಬಂದಿ ವರ್ಗದವರನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆ/ಇಮೇಲ್ ವಿಳಾಸಗಳನ್ನು ಶಾಲಾ ಶಿಕ್ಷಕರು ಪಡೆದುಕೊಳ್ಳಬೇಕು. ರಜಾ ಅವಧಿಯನ್ನು ಕೆಲಸದ ಅವಧಿ ಎಂದೇ ಪರಿಗಣಿಸಲಾಗುತ್ತದೆ. ಅಗತ್ಯ ಬಿದ್ದಾಗ ಶಿಕ್ಷಕರು ಸೇವೆಗೆ ಹಾಜರಾಗಬೇಕು ಎಂಬಿತ್ಯಾದಿ ಷರತ್ತುಗಳೊಂದಿಗೆ ಶಿಕ್ಷಕರಿಗೆ ರಜೆ ಘೋಷಣೆ ಮಾಡಲಾಗಿದೆ.