ವ್ಯಕ್ತಿಯೋರ್ವನನ್ನು ರೌಡಿಗಳಿಂದ ಅಪಹರಣ ಮಾಡಿಸಿ ಹತ್ತು ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಚಿಕ್ಕಮಗಳೂರ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಠಾಣಾ ವ್ಯಾಪ್ತಿಯಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವಕನ ಅಪಹರಣಕ್ಕೆ ಕುಮ್ಮಕ್ಕು ನೀಡಿ 10 ಲಕ್ಷ ರೂಪಾಯಿ ಪಡೆದುಕೊಂಡು ಪರಾರಿಯಾಗಿದ್ದಾರೆ ಎಂಬ ಆರೋಪ ಕಲ್ಲಪ್ಪ ಹಂಡಿಭಾಗ್ ಮೇಲೆ ಕೇಳಿ ಬಂದಿತ್ತು. ಪ್ರಕರಣದಿಂದ ಅವಮಾನವಾಗುತ್ತದೆ ಎಂಬ ಭಯಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಹೋಮ್ ಸ್ಟೇವೊಂದರಲ್ಲಿ ತೇಜಸ್ ಗೌಡ ಮತ್ತು ಆತನ ಸ್ನೇಹಿತರು ಇಸ್ಪೇಟ್ ಆಡುತ್ತಿದ್ದರು. ಈ ಸಮಯದಲ್ಲಿ ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ತೇಜಸ್ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿದ್ದು, ನಂತರ ಜೂನ್ 27ರಂದು ಅವರನ್ನು ಅಪಹರಿಸಲಾಗಿತ್ತು.
ನಂತರ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ 10 ಲಕ್ಷ ರೂಪಾಯಿ ಹಣ ತಲುಪಿಸುವಂತೆ ಕರೆ ಮಾಡಿ ತಿಳಿಸಿದ್ದರು. ತೇಜಸ್ ಸ್ನೇಹಿತ ಪವನ್ 10 ಲಕ್ಷ ರೂಪಾಯಿ ತಲುಪಿಸಿದ್ದ. ನಂತರ ತೇಜಸ್ ಡಿವೈಎಸ್ಪಿ ವಿರುದ್ಧ ದೂರು ದಾಖಲಿಸಿದ್ದು, ತನಿಖೆಯ ಬಳಿಕ ವಿಷಯ ಬಹಿರಂಗವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ