ಪತಿಯೇ ಪತ್ನಿಗೆ ಹೆಚ್ಐವಿ ರಕ್ತವನ್ನು ಇಂಜೆಕ್ಟ್ ಮಾಡಿ ಹೇಯ ಕೃತ್ಯ ರಾಯಚೂರಿನಲ್ಲಿ ನಡೆದಿದೆ. ಅಲ್ಲದೇ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.
ರಾಯಚೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯನಾಗಿರೋ ಪತಿ ತನ್ನ ಆಸ್ಪತ್ರೆಗೆ ಕರೆದೊಯ್ದು ಹೆಚ್ಐವಿ ರಕ್ತವನ್ನು ಇಂಜೆಕ್ಟ್ ಮಾಡಿದ್ದಾರೆ. ಈ ಕೃತ್ಯದಲ್ಲಿ ಪತಿಯ ಪತಿ ತಂದೆ, ತಾಯಿ, ಸಹೋದರಿ ಸಹಕಾರವಿದೆ ಎಂದು ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪೀಡಿತೆ ದೂರು ದಾಖಲಿಸಿದ್ದಳು.
ಅಕ್ಕನ ಮಗಳ ಮೇಲಿನ ವ್ಯಾಮೋಹಕ್ಕೆ, ಆಕೆಯನ್ನು ಮದುವೆಯಾಗಬೇಕೆನ್ನುವ ದುರಾಸೆ ವೈದ್ಯನ ತಲೆ ಸೇರಿತ್ತು. ಪತ್ನಿ ದೂರವಾಗಲೆಂದು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ ಆತ ಆಕೆ ತನ್ನನ್ನು ಬಿಟ್ಟು ಹೋಗಲು ತಯಾರಿಲ್ಲದಾದಾಗ ಈ ಕೃತ್ಯಕ್ಕೆ ಕೈ ಹಾಕಿದ್ದ ಎಂದು ಹೇಳಲಾಗುತ್ತಿದೆ.
ಪೊಲೀಸರು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ತನಿಖಾಧಿಕಾರಿಯನ್ನು ಬದಲಾಯಿಸಬೇಕೆಂದು ಪೀಡಿತೆ ಎಸ್ಪಿ ಚೇತನ ಸಿಂಗ್ ರಾಥೋಡ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅವರ ನೋವಿಗೆ ಸ್ಪಂದಿಸಿರುವ ಎಸ್ಪಿ ನ್ಯಾಯಾಲಯದ ಅನುಮತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಪೀಡಿತಳ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಚಾರ್ಜ್ಶೀಟ್ ದಾಖಲಿಸಲಾಗಿದ್ದು ನಾದಿನಿ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲದ ಕಾರಣ ಚಾರ್ಜ್ಶೀಟ್ ದಾಖಲಿಸಲಾಗಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.