Publish Date: Sat, 07 Dec 2024 (15:51 IST)
Updated Date: Sat, 07 Dec 2024 (15:56 IST)
ಬೆಂಗಳೂರು: ಮುಡಾ, ವಾಲ್ಮೀಕಿ ಹಗರಣದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಬಿಜೆಪಿಗೆ ಈಗ ಕಾಂಗ್ರೆಸ್ ತಿರುಗೇಟು ಕೊಡಲು ಕೊವಿಡ್ ಹಗರಣವನ್ನು ಬಳಸುತ್ತಿದೆ. ಕೊವಿಡ್ ಹಗರಣದಲ್ಲಿ ಬಿಜೆಪಿ ಭಾಗಿಯಾಗಿರುವುದರ ಬಗ್ಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಹಲವು ಆರೋಪ ಮಾಡಿದ್ದಾರೆ.
ಇಂದು ನಡೆದ ಸಂಪುಟ ಉಪ ಸಮಿತಿಯ ಎರಡನೇ ಸಭೆಯನ್ನು ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ಕಾಲದ ಕೊವಿಡ್ ಹಗರಣದ ಬಗ್ಗೆ ತನಿಖೆ ನಡೆಸುವ ನಿರ್ಧಾರ ಪ್ರಕಟಿಸಿದ್ದಾರೆ. ನ್ಯಾ. ಕುನ್ಹಾ ಆಯೋಗದ ವರದಿಯ ಪರಿಶೀಲನೆ ನಡೆಸಲಾಗಿದೆ.
ಈ ವರದಿಯಲ್ಲಿ ಕೊವಿಡ್ ಸಮಯದಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 84 ಲಕ್ಷ ಆರ್ ಟಿಪಿಸಿಆರ್ ಟೆಸ್ಟ್ ನಡೆಸಲು 500 ಕೋಟಿ ರೂ. ಬಿಲ್ ಮಾಡಿ 400 ಕೋಟಿ ರೂ. ಪಾವತಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಕಿದ್ವಾಯಿ ಒಂದೇ ಆಸ್ಪತ್ರೆಯಲ್ಲಿ 24 ಲಕ್ಷ ಆರ್ ಟಿಪಿಸಿಆರ್ ಟೆಸ್ಟ್ ನಡೆಸಿರುವುದು ಅನುಮಾನಸ್ಪದವಾಗಿದೆ ಎಂದಿದ್ದಾರೆ.
ಕುನ್ಹಾ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಿದ್ದಾಗಿ ಹೇಳಿದ್ದಾರೆ. ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.