Publish Date: Wed, 30 Aug 2023 (18:23 IST)
Updated Date: Wed, 30 Aug 2023 (18:27 IST)
ಕೆಂಪು ರೋಗಕ್ಕೆ ತುತ್ತಾದ ಮೆಕ್ಕೆಜೋಳ ಬೆಳೆಯನ್ನು ನಾಲ್ವರು ರೈತರು ಟ್ರ್ಯಾಕ್ಟರ್ನ ರೂಟರ್ನಿಂದ ನಾಶಪಡಿಸಿದ ಘಟನೆ ಹಾವೇರಿಯ ಹಿರೇಚಿಕ್ಕಲಿಂಗದಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪ್ರಕಾಶ್ ಕಂಬಳಿ ಎಂಬುವವರು 3.20 ಎಕರೆ, ನಾಗಪ್ಪ ನೆಟಗಲ್ಲಣ್ಣನವರ 3.27 ಎಕರೆ, ಹನುಮಂತಪ್ಪ ಪಿಚ್ಚಿ 10 ಎಕರೆ ಹಾಗೂ ಫಕೀರೇಶ ಲಿಂಗಮ್ಮನವರ 8 ಎಕರೆ ಸೇರಿ ಒಟ್ಟು 24.47 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸಿದ್ದಾರೆ. ರೈತರು ಎಕರೆಗೆ 15ರಿಂದ 20 ಸಾವಿರ ರೂಪಾಯಿ ಹಣ ಖರ್ಚು ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೆ, ಸರಿಯಾಗಿ ಮಳೆ ಬಾರದ ಕಾರಣ ಮೊಣಕಾಲವರೆಗೂ ಬೆಳೆದಿದ್ದ ಮೆಕ್ಕೆಜೋಳಕ್ಕೆ ಕೆಂಪು ರೋಗ ಕಾಣಿಸಿಕೊಂಡಿತ್ತು. ಅಲ್ಲದೆ ಬೆಳೆಯು ಒಣಗಲು ಆರಂಭಿಸಿತ್ತು. ಇದರಿಂದ ಬೇಸತ್ತ ರೈತರು ಟ್ರ್ಯಾಕ್ಟರ್ನ ರೂಟರ್ನಿಂದ ಬೆಳೆಯನ್ನು ನಾಶಪಡಿಸಿದ್ದಾರೆ.