Publish Date: Tue, 09 Jan 2024 (15:05 IST)
Updated Date: Tue, 09 Jan 2024 (16:09 IST)
ಬೆಂಗಳೂರು-ರಾಜ್ಯದಲ್ಲಿ ಈಗಾಗಲೇ ಇರುವ ಒಂದು ಉಪ ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಮೂರು ಅಥವಾ ನಾಲ್ಕು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬುದು ಕಾಂಗ್ರೆಸ್ಸಿನಲ್ಲಿ ಒಂದು ಬಣ ಆಗ್ರಹಿಸುತ್ತಿದೆ. ಅದಕ್ಕೆ ಬಹುಮುಖ್ಯ ಕಾರಣವೇ ಜಾತಿ ಸಮೀಕರಣ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟದಲ್ಲಿ ಪ್ರಬಲ ಹಾಗೂ ಪ್ರಮುಖ ಸಮುದಾಯಗಳಿಗೆ ಹೀಗೊಂದು ಪ್ರಾತಿನಿಧ್ಯ ಇರಲೇಬೇಕೆಂದು ರಾಜ್ಯ ಕಾಂಗ್ರೆಸ್ಸಿನ ಕೆಲವು ನಾಯಕರು ಹೇಳಿದ್ದಾರೆ.
ಇದೇ ಕಾರಣಕ್ಕಾಗಿ, ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ರಣದೀಪ್ ಸಿಂಗ್ ಸುರ್ಜೇವಾಲ, ಜ. 8ರಂದು ರಾತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಹಿರಿಯ ಸಚಿವರಾದ ಹಾಗೂ ಎಸ್ಸಿ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿರುವ ಜಿ. ಪರಮೇಶ್ವರ್, ಎನ್. ರಾಜಣ್ಣ, ಎಚ್.ಸಿ. ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇನ್ನೂ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡಬೇಕು. ಅವುಗಳಲ್ಲಿ ಒಂದನ್ನು ಲಿಂಗಾಯತರಿಗೆ, ಮತ್ತೊಂದನ್ನು ಹಿಂದುಳಿದ ವರ್ಗಕ್ಕೆ ಹಾಗೂ ಮಗದೊಂದನ್ನು ಪರಿಶಿಷ್ಟ ಜಾತಿ - ಪಂಗಡಗಳಿಗೆ ನೀಡಬೇಕು ಎಂಬುದು ಕಾಂಗ್ರೆಸ್ಸಿನ ಹಿರಿಯ ನಾಯಕರ ಒತ್ತಾಯವಾಗಿದೆ.