Publish Date: Thu, 21 Sep 2017 (12:07 IST)
Updated Date: Thu, 21 Sep 2017 (12:12 IST)
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ – 2017ರ ಮಹಿಳಾ ದಸರಾ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗಾಗಿ ಮೈಸೂರು ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದ ಆವರಣದಲ್ಲಿ ರಂಗೋಲಿ ಸ್ಫರ್ಧೆ ಏರ್ಪಡಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ರಂಗೋಲಿ ಬಿಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಈ ರಂಗೋಲಿ ಸ್ಪರ್ಧೆಯಲ್ಲಿ ವಯಸ್ಸಿನ ಅಂತರವಿಲ್ಲದೆ 85 ಜನ ಮಹಿಳಾ ಮಣಿಗಳು ಭಾಗವಹಿಸಿದ್ದು, ವಿವಿಧ ವಿನ್ಯಾಸದ ಅಂಬಾರಿ ಹೊತ್ತ ಆನೆ, ಗಡಿ ಕಾಯುತ್ತಿರುವ ಹೆಮ್ಮೆಯ ಯೋಧರಿಗೆ ನಮನ, ನೀರು ಉಳಿಸಿ ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಸಂದೇಶ ಸಾರುವ ತರಹೇವಾರಿ ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿಗಳು ಎಲ್ಲರ ಗಮನ ಸೆಳೆದವು.
ಇನ್ನುಳಿದ ಕೆಲ ಆಕರ್ಷಕ ರಂಗೋಲಿಗಳು ಜನರ ಮೆಚ್ಚುಗೆ ಪಡೆದವು. ಅಂದ ಚಂದದ ರಂಗೋಲಿ ಮುಂದೆ ನಿಂತು ಜನರು ಸೆಲ್ಫೀ ಕ್ಲಿಕ್ಕಿಸಿಕೊಂಡರು.