Publish Date: Thu, 20 Aug 2026 (16:38 IST)
Updated Date: Thu, 20 Aug 2026 (16:41 IST)
ಬೆಂಗಳೂರು: ನಕಲಿ ಖಾತೆಗಳಿಗೆ ಹಣ ಹೇಗೆ ವರ್ಗಾವಣೆ ಮಾಡಬೇಕು ಎಂಬುದರಲ್ಲಿ ತಜ್ಞರಾಗಿರುವ ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಅಂಕಿ- ಅಂಶಗಳ ಖಾತೆ ನೀಡುವ ಬದಲು ಹಣಕಾಸು ಖಾತೆ ನೀಡಬೇಕು ಎಂದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಹೇಳಿದ್ದಾರೆ.
ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರನ್ನು ಹಣಕಾಸು ಖಾತೆ ಸಚಿವರಾಗಿ ಮಾಡಿದರೆ ರಾಜ್ಯದ ಖಜಾನೆ ಹಣವನ್ನು ದೇಶದ ವಿವಿಧ ಬ್ಯಾಂಕ್ಗಳ ಖಾತೆಗೆ ಚೆನ್ನಾಗಿ ವರ್ಗಾವಣೆ ಮಾಡಿ ಲೂಟಿ ಮಾಡುತ್ತಾರೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಷರತ್ತಿನ ಮೇಲೆ ಜಾಮೀನು ಪಡೆದು ಸಚಿವ ನಾಗೇಂದ್ರ ಅವರು ಹೊರಗೆ ಇದ್ದಾರೆ. ಅವರು ಆರೋಪಮುಕ್ತರಾಗಿಲ್ಲ. ಅವರ ರಾಜೀನಾಮೆವರೆಗೆ ಬಿಜೆಪಿ ಹೋರಾಟ ಮಾಡಲಿದೆ. ನಾಗೇಂದ್ರ ಅವರು ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಗೆ ಮತ್ತು ಹೈಕಮಾಂಡಿಗೆ ಬ್ಲ್ಯಾಕ್ಮೇಲ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಅದು ಪರ್ಸಂಟೇಜ್ ಕಥೆ ಅಲ್ಲ. ಅದು ಇಡಿಯಾಗಿ ನುಂಗಿದ ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ನಿರ್ಭಯವಾಗಿ ನಡೆಸಿದ ಬಹುದೊಡ್ಡ ಲೂಟಿ ಎಂದರು.
ಇಲಾಖೆಯ ಸಚಿವರು, ಎಂಡಿ, ಲೆಕ್ಕಾಧಿಕಾರಿ, ಪಿಎ ಹೀಗೆ ಎಲ್ಲರೂ ಸೇರಿ ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಹಣವನ್ನು ತಮ್ಮ ಕಲ್ಯಾಣಕ್ಕೆ ಬಳಸಿಕೊಂಡರು. ಇದು ಪರಿಶಿಷ್ಟ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿದರು. ಆರೋಪಿಗಳು ನಿಗಮದ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿ ಭ್ರಷ್ಟಾಚಾರ ನಡೆಸಿದರು. ಹದಿನಾಲ್ಕು ಜನರ ಮೇಲೆ ಎಫ್ಐಆರ್ ದಾಖಲಾಗಿ ಬಂಧನಕ್ಕೊಳಗಾಗಿದ್ದರು. ಕೆಲವರು ನ್ಯಾಯಾಲಯದ ಷರತ್ತಿನ ಮೇಲೆ ಜಾಮೀನು ಪಡೆದರೆ ಇನ್ನೂ ಕೆಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ವಿವರಿಸಿದರು.
ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯರ ರಕ್ಷಣೆಗೆ ಇರುವುದು. ಯಾರೇ ಭ್ರಷ್ಟಚಾರ ನಡೆಸಿದರೆ ಅವರಿಗೆ ಶಿಕ್ಷೆ ಕೊಡಿ ಎಂದು ಸಂವಿಧಾನ ಹೇಳಿದೆ. ಸಚಿವರಾದಾಗ ನಾಗೇಂದ್ರ ಅವರು ಸಂವಿಧಾನದ ಪ್ರತಿ ಹಿಡಿದು ಸಂವಿಧಾನ ರಕ್ಷಣೆ ಕೊಡುತ್ತೆ ಅಂತ ಹೇಳಿದರು. ಆದರೆ ಸಂವಿಧಾನ ಭ್ರಷ್ಟರಿಗೆ ರಕ್ಷಣೆ ಕೊಡಲ್ಲ. ಅದು ಶಿಕ್ಷೆ ನೀಡುತ್ತದೆ. ನಾಗೇಂದ್ರ ಅವರು ಸಂವಿಧಾನದ ಮೌಲ್ಯಗಳಿಗೆ ಅಪಚಾರ ಎಸಗಿದ್ದಾರೆ ಎಂದರು.
ನಾನು ಪರಿಶಿಷ್ಟ ಪಂಗಡದವನು ಅಂತ ನನ್ನನ್ನು ಗುರಿ ಮಾಡಲಾಗುತ್ತಿದೆ ಎಂದು ನಾಗೇಂದ್ರ ಅವರು ಹೇಳುತ್ತಿದ್ದಾರೆ. ಆದರೆ ಭ್ರಷ್ಟಾಚಾರಿಗಳಿಗೆಜಾತಿ ಇಲ್ಲ. ಇಷ್ಟಕ್ಕೂ ನುಂಗಿದ್ದು ಪರಿಶಿಷ್ಟರ ಹಣ. ಅವರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಹಣ ಎಂದರು.
ವಾಲ್ಮೀಕಿ ನಿಗಮದ ಅಧಿಕಾರಿ ಮೃತ ಚಂದ್ರಶೇಖರ್ ಅವರ ಸಾವಿಗೂ ಮೊದಲು ಬರೆದ ಡೆತ್ ನೋಟ್ ಎಲ್ಲವನ್ನೂ ಬಹಿರಂಗ ಮಾಡಿದೆ. ತನ್ನ ಸಾವಿಗೆ ಕಾರಣದರಾವರ ಪಟ್ಟಿಯನ್ನು ಅವರು ನೀಡಿದ್ದಾರೆ. ಅದರಲ್ಲಿ ಕಿಂಗ್ಪಿನ್ ನೆಕ್ಕುಂಟಿ ನಾಗರಾಜ್, ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ, ಬ್ಯಾಂಕ್ ವ್ಯವಸ್ಥಾಪಕರು ಎಲ್ಲರ ಹೆಸರ ಪ್ರಸ್ತಾಪ ಇದೆ ಎಂದು ಹೇಳಿದರು.
ಹಣರಣದಲ್ಲಿ ಆಗಿನ ಸಚಿವ ನಾಗೇಂದ್ರ ಅವರ ಮೌಖಿಕ ಸೂಚನೆ ಬಹುದೊಡ್ಡ ಪಾತ್ರ ವಹಿಸಿದೆ. ಸಚಿವರು ಮೌಖಿಕವಾಗಿ ಸೂಚಿಸಿರುವ ಹಿನ್ನೆಲೆಯಲ್ಲೇ ನಿಗಮದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇಡೀ ಭ್ರಷ್ಟಾಚಾರದಲ್ಲಿ ಸಚಿವರ ಸೂಚನೆ ಮಹತ್ವದ ಪಾತ್ರವಿದೆ ಎಂದರು.
ನೆಕ್ಕುಂಟಿ ನಾಗರಾಜ್ ಮಹತ್ವದ ಪಾತ್ರ..
ಇಡೀ ಹಗರಣದಲ್ಲಿ ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್ ಕಿಂಗ್ಪಿನ್ ಆಗಿದ್ದಾರೆ. ನೆಕ್ಕುಂಟಿ ನಾಗರಾಜ್ ಜೊತೆ ಆಗಿನ ಡಿಸಿಎಂ ಈಗಿನ ಸಿಎಂ ಫೆÇೀಟೊಗಳಿವೆ. ಫೆÇೀಟೊಗಳು ಕಿಂಗ್ಪಿನ್ ಹಾಗೂ ಸಚಿವರಿಗೂ ಮತ್ತು ಕಾಂಗ್ರೆಸ್ ಮುಖಂಡರಿಗೂ ಇರುವ ಗಹನವಾದ ಸಂಬಂಧ ಸೂಚಿಸುತ್ತಿದೆ ಎಂದರು. ಶಾಂಘ್ರಿಲಾ ಹೋಟೆಲ್ನಲ್ಲಿ ಸಭೆ ಮಾಡಿ ಸಚಿವರು ಸೂಚನೆ ನೀಡಿರುವುದು. ಅದರಂತೆ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ಎಲ್ಲ ವಿವರವನ್ನೂ ನೀಡಿದರು. ಮತ್ತೊಬ್ಬ ಆರೋಪಿ ಪಿಎ ನಾಗರಾಜ್ ಪಾತ್ರವೂ ಇದೆ. ಮಧ್ಯಂತರ ವರದಿಯಲ್ಲಿ ಪ್ರಸ್ತಾಪವಾಗಿದೆ ಎಂದು ವಿವರಿಸಿದರು.
ನಾಗೇಂದ್ರ ಅವರ ರಾಜೀನಾಮೆಯನ್ನು ಸಂವಿಧಾನದ ಅಡಿಯಲ್ಲೇ ಕೇಳ್ತಾ ಇದ್ದೇವೆ. ಇಷ್ಟೊಂದು ಆಧಾರ ಇದ್ದಾಗಲೂ ಮತ್ತೆ ಸಚಿವರಾಗುವುದು ಪ್ರಜಾಪ್ರಭುತ್ವ ಹಾಗೂ ಎಸ್ಟಿ ಸಮುದಾಯಕ್ಕೆ ಕಳಂಕ. ನಾಗೇಂದ್ರ ಅವರಿಗೆ ಜಾಮೀನು ಸಿಕ್ಕಿದೆ ಅಷ್ಟೇ. ಕ್ಲೀನ್ ಚಿಟ್ ಸಿಕ್ಕಿಲ್ಲ. ನ್ಯಾಯಾಲಯ ಆರೋಪ ಮುಕ್ತ ಮಾಡಿಲ್ಲ. ಆದ್ದರಿಂದ ಸಚಿವರಾಗಿ ಇರುವುದು ಸರಿಯಲ್ಲ ಎಂದು ಟೀಕಿಸಿದರು.
ಹಗರಣದ ಮತ್ತೊಬ್ಬ ಆರೋಪಿ ಸತ್ಯನಾರಾಯಣ ವರ್ಮಾ ಅವರು ತಮಗೆ ಸಚಿವರ ಆಪ್ತರು ಬೆದರಿಕೆ ಹಾಕಿರುವುದನ್ನು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ವರ್ಮಾ ಅವರಿಗೆ ಸಚಿವರಿಂದ ಜೀವ ಬೆದರಿಕೆ ಇರುವ ಬಗ್ಗೆ ತನಿಖೆ ನಡೆಸಲು ಕೋರ್ಟ್ ಹೇಳಿದೆ ಎಂದು ವಿವರಿಸಿದರು.
ವಾಲ್ಮೀಕಿ ನಿಗಮ ಹಗರಣದ ಹಣ ಲ್ಯಾಂಬೋರ್ಗಿನಿ ಕಾರ್ ಶೋರೂಮ್ಗಳಿಗೆ, ಬಾರ್ಗಳಿಗೆ, ಚಿನ್ನ ಬೆಳ್ಳಿ ಅಂಗಡಿಗೆ ಹೋಗಿದೆ. ಭ್ರಷ್ಟಚಾರ ಸಹಿಸಲ್ಲ ಅಂತ ಎಂದು ಹೇಳುವ ಮುಖ್ಯಮಂತ್ರಿಗಳು ಬಹುಕೋಟಿ ಲೂಟಿ ಮಾಡಿದವರನ್ನು ಮಂತ್ರಿ ಮಾಡಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಆಗಿದೆ ಎಂದರು.
ಬಳ್ಳಾರಿ ಗಣಿ ಹಗರಣದಲ್ಲೂ ನಾಗೇಂದ್ರ ಒಬ್ಬ ಆಪಾದಿತ; ಅವರು ಜೈಲಿನಲ್ಲಿದ್ದರು ಎಂದು ಗಮನ ಸೆಳೆದರು. ಇದು ಎಸ್ಟಿ ಸಮುದಾಯದ ಹಣ. ಇನ್ನೊಬ್ಬರನ್ನು ಯಾರನ್ನಾದರೂ ಸಚಿವರನ್ನಾಗಿ ಮಾಡಿ. ಭ್ರಷ್ಟಾಚಾರಿಯನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ನಮ್ಮ ಆಕ್ಷೇಪ ಎಂದು ತಿಳಿಸಿದರು. ಒಬ್ಬ ಅಮಾಯಕ, ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರನ್ನು ಸಚಿವರನ್ನಾಗಿ ಪ್ರಾಮಾಣಿಕರಿಗೆ ನೀವೇನು ಸಂದೇಶ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ನಾಗೇಂದ್ರರನ್ನು ಮುಂದುವರೆಸಿದ್ದರ ಜೊತೆಗೆ ಭಂಡತನದಲ್ಲಿ ಸಮರ್ಥನೆ ಮಾಡುತ್ತಿದ್ದಾರೆ. ಇವರನ್ನೇ ಸಚಿವರನ್ನಾಗಿ ಮಾಡಿದ ಮೇಲೆ ಎಂ.ಡಿ. ಪದ್ಮನಾಭ, ಅಕೌಂಟೆಂಟ್ ಪರಶುರಾಮರಿಗೆ ಒಂದೊಂದು ಖಾತೆ ನೀಡಿ ಲೂಟಿ ಹೊಡೆಯಲು ಸಲಹೆ ಕೊಡುವ ವಿಶೇóಷ ಅಧಿಕಾರಿ ಎಂದು ನೇಮಿಸಿ ಎಂದು ವ್ಯಂಗ್ಯವಾಡಿದರು. ಎಸ್ಐಟಿ ಪೂರ್ಣ ಪ್ರಮಾಣದ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಇ.ಡಿ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಗಮನ ಸೆಳೆದರು. ಇನ್ನೂ 46 ಕೋಟಿಗೂ ಹೆಚ್ಚು ಹಣ ವಶಕ್ಕೆ ಪಡೆದಿಲ್ಲ ಎಂದು ತಿಳಿಸಿದರು.
ನನಗೇ ಯಾಕೆ? ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಆಗಿಲ್ಲವೇ? ಜಮೀರ್ ರಾಜೀನಾಮೆ ಯಾಕೆ ಕೇಳುತ್ತಿಲ್ಲ ಎಂದು ನಾಗೇಂದ್ರರು ಪರೋಕ್ಷವಾಗಿ ಕೇಳಿದ್ದಾರೆ. ಗೃಹಲಕ್ಷ್ಮಿ ಹಣ 5 ಸಾವಿರ ಕೋಟಿಯ ವಿವರ ಸಿಕ್ಕಿತೇ ಎಂದೂ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ಈ ಮೂಲಕ ಹಗರಣ ಕಾರ್ಮಿಕರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ಅಲ್ಪಸಂಖ್ಯಾತರ ಇಲಾಖೆಯಲ್ಲೂ ಆಗಿದೆ ಎಂದಿದ್ದಾರೆ. ನೀವು ಹೇಳಿದ್ದರ ಕಡೆ ಗಮನ ಹರಿಸುತ್ತೇವೆ ಎಂದು ತಿಳಿಸಿದರು. ನಿಮ್ಮದು ಅಂಗೈ ಹುಣ್ಣಿನಷ್ಟು ಸ್ಪಷ್ಟವಿದೆ. ಇತರ ಇಲಾಖೆ ವಿಚಾರದಲ್ಲಿ ಎಕ್ಸ್ ರೇ, ಸ್ಕ್ಯಾನಿಂಗ್ ಅವಶ್ಯಕತೆ ಇದೆ ಎಂದು ಸ್ಪಷ್ಟಪಡಿಸಿದರು. ಮುಂದೆ ಅವರನ್ನೂ ನಿಮ್ಮ ಜಾಗಕ್ಕೆ ನಿಲ್ಲಿಸುತ್ತೇವೆ ಎಂದರು.
ಕಾನೂನು, ಜಾತಿಯ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಲು ಲೈಸನ್ಸ್ ಕೊಟ್ಟಿಲ್ಲ ಎಂದ ಅವರು, ಆಪಾದನೆ ಇದೆ. ಎಫ್ಐಆರ್ನಲ್ಲಿ ಹೆಸರಿದೆ. ಆಸ್ತಿ ಮುಟ್ಟುಗೋಲೂ ಆಗಿದೆ. ಅನುಮಾನಾಸ್ಪದ ನಡವಳಿಕೆ, ಕಿಂಗ್ಪಿನ್ಗೂ ಇವರಿಗೂ ಇರುವ ಆಂತರಿಕ ಸಂಬಂಧ, ಫೋಟೊಗಳ ಕಥೆ- ಇವೆಲ್ಲ ಬ್ರಹ್ಮಾಂಡ ಭ್ರಷ್ಟಾಚಾರದ ಕರಾಳ ಮುಖದ ದರ್ಶನ ಮಾಡುತ್ತಿವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ರಾಜ್ಯದ ಉದ್ದಗಲಕ್ಕೆ ಹೋರಾಟ ನಡೆಯುತ್ತಿದೆ. ಉಳಿದವರ ಭ್ರಷ್ಟಾಚಾರದ ಬಗ್ಗೆಯೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ನಿರ್ದೋಷಿಗಳಾಗಿದ್ದರೆ ಹಿಂದೆ ರಾಜೀನಾಮೆ ಪಡೆದುದೇಕೆ ಎಂದು ಕೇಳಿದರು. ಚಂದ್ರಶೇಖರ್ ಅವರು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳದೇ ಇದ್ದರೆ ಇಡೀ ಹಗರಣ ಏನಾಗುತ್ತಿತ್ತು ಎಂದು ಪ್ರಶ್ನೆ ಹಾಕಿದರು. ನೀವು ಒಬ್ಬ ಭ್ರಷ್ಟನಿಗೆ ಆಶ್ರಯ ಕೊಟ್ಟು ರಕ್ಷಿಸಿದರೆ ನಿಮ್ಮ ಕುರ್ಚಿ ಸಮೇತ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನರು ಆಹುತಿ ಪಡೆಯುತ್ತಾರೆ ಎಂದು ಎಚ್ಚರಿಸಿದರು.
ನಮಗೆ ಬರ, ಬೆಲೆ ಏರಿಕೆಯ ಕುರಿತು ಚರ್ಚೆ ಮಾಡಬೇಕಿದೆ. ಕೆಪಿಎಸ್ಸಿ ಕರ್ಮಕಾಂಡ, ಬಿಡದಿ, ನೈಸ್ ಸೇರಿ ಜ್ವಲಂತ ವಿಷಯಗಳ ಕುರಿತು ಚರ್ಚೆ ಮಾಡಬೇಕಿದೆ. ಕೆಪಿಎಸ್ಸಿ ಕರ್ಮಕಾಂಡ ಕುರಿತು ಭ್ರಷ್ಟರನ್ನು ಕುಳಿತುಕೊಳ್ಳಿಸಿ ಅದರ ಬಗ್ಗೆಯೇ ಮಾತನಾಡಿದರೆ ಗೋರ್ಕಲ್ಲ ಮೇಲೆನೀರು ಸುರಿದಂತೆ ಸರ್ವಜ್ಞ ಎಂದಾಗುತ್ತದೆ ಎಂದು ಹೇಳಿದರು. ಸಂವಿಧಾನದ ಪ್ರತಿ ಇರುವುದು ಭ್ರಷ್ಟಾಚಾರದ ರಕ್ಷಣೆಗಾ? ಎಂದು ಕೇಳಿದರು. ಶಾಸಕರಾದ ಪ್ರಭು ಚವ್ಹಾಣ್, ಮಹೇಶ್ ಟೆಂಗಿನಕಾಯಿ, ಬಸವರಾಜ ಮತ್ತಿಮೂಡ ಅವರು ಉಪಸ್ಥಿತರಿದ್ದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ