Publish Date: Mon, 17 Sep 2018 (19:10 IST)
Updated Date: Mon, 17 Sep 2018 (19:13 IST)
ಕಲಬುರಗಿ ತಾಲೂಕಿನ ಚೌಡಾಪೂರ ತಾಂಡದ ಸಂತೋಷ್ ಶಿವಾಜಿ ಕೋಕರೆ ಅವರ ಹೊಲದಲ್ಲಿ ತೊಗರಿ ಬೆಳೆ ಸಮೀಕ್ಷೆಯನ್ನು ಸಿಎಂ ನಡೆಸಿದರು. ಕಲಬುರಗಿಯಲ್ಲಿ ಬೆಳೆ ಸಮೀಕ್ಷೆ ನಡೆಸಿದಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಗಿಡಗಳು ಫಸಲು ಕಟ್ಟದೆ ಇರುವುದಕ್ಕೆ ಕಾರಣಗಳೇನು ಎಂದು ಅಧಿಕಾರಿಗಳಿಗೆ ಮಾಹಿತಿ ಕೇಳಿದರು.
ವಿಳಂಬವಾಗಿ ಬಿತ್ತನೆ ಹಾಗೂ ಬಿತ್ತನೆ ಬಳಿಕ ತೇವಾಂಶದ ಕೊರತೆಯಿಂದ ಫಸಲು ಕಟ್ಟುತ್ತಿಲ್ಲ. ಗಿಡಗಳು ಇಷ್ಟೊತ್ತಿಗೆ ಒಂದರಿಂದ ಒಂದುವರೆ ಮೀಟರ್ ಬೆಳೆದು ಫಸಲು ಕಟ್ಟಾಬೇಕಾಗಿತ್ತು. ಆದರೆ, ಕೇವಲ ಒಂದು ಅಡಿ ಬೆಳೆದಿದೆ. ಇದೇ ಟಿಎಸ್3ಆರ್ ತಳಿಯ ತೊಗರಿ ಗಿಡಗಳು, ಸೇಡಂನಲ್ಲಿ ಒಂದುವರೆ ಮೀಟರ್ನಷ್ಟು ಬೆಳೆದಿರುವುದನ್ನು ಪ್ರಾತ್ಯಕ್ಷಿಕೆ ಮೂಲಕ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಿತೇಂದ್ರನಾಥ್ ಸುಗೂರು ಅವರು ವಿವರಿಸಿದರು.
ಉನ್ನತ ಅಧಿಕಾರಿಗಳ ಸಭೆ: ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬೆಳೆ ನಾಶ ಕುರಿತಂತೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚಿಸುವುದಾಗಿ ಅವರು ಭರವಸೆ ನೀಡಿದರು.
ಬಳಿಕ, ಗಬ್ಬೂರ (ಬಿ) ಗ್ರಾಮದ ಮೊಹಮದ್ ಹುಸೇನಿ ಮೌಲಾ ಸಾಬ್ ಮಕದಮ್ ಅವರ ಹೊಲದಲ್ಲಿ ಉದ್ದು ಬೆಳೆಯನ್ನು ವೀಕ್ಷಿಸಿದರು. ಟಿಎಯು-1 ತಳಿಯ ಈ ಉದ್ದು ಬೆಳೆ ಕೂಡ ತೇವಾಂಶ ಇಲ್ಲದೆ ಹೂ ಬಿಡುವ ಹಂತದಲ್ಲಿ ನಾಶವಾಗಿದೆ. ಸರಿಯಾಗಿ ಬೆಳೆ ಬಂದರೆ, ಒಂದು ಗಿಡಕ್ಕೆ 60 ರಿಂದ 70 ಕಾಯಿಗಳ ಕಟ್ಟಿ, 8 ರಿಂದ 10 ಬೀಜಗಳು ಇರಬೇಕು. ಆದರೆ, ಹೂ ಬಿಡುವ ಮುನ್ನ 8 ರಿಂದ 10 ದಿನಗಳ ಕಾಲ ನೀರಿಲ್ಲದೆ, ಇರುವುದರಿಂದ ಕೇವಲ ನಾಲ್ಕೈದು ಬೀಜಗಳು ಇವೆ ಎಂದು ಕೃಷಿ ಅಧಿಕಾರಿಗಳು ವಿವರಿಸಿದರು.