Publish Date: Thu, 28 Oct 2021 (20:55 IST)
Updated Date: Thu, 28 Oct 2021 (21:00 IST)
ಬೆಂಗಳೂರು: ವಿವಿಧ ಆಪ್ ಗಳ ಮೂಲಕ ಆನ್ ಲೈನ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಮೂರು ಜನರನ್ನು ಬಂಧಿಸಿ ನಗದು ಹಣ 3.5 ಲಕ್ಷ ರೂ ಮತ್ತು ಮೂರು ಮೊಬೈಲ್ ಫೋನ್ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅ 27 ರಂದು ಬೆಂಗಳೂರು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಖವಾದ ಮೂರು ವಿವಿಧ ಸ್ಥಳಗಳಲ್ಲಿ ದುಬೈ ನಲ್ಲಿ ನೆಡೆಯುತ್ತಿರುವ ಟಿ-20 ವಿಶ್ವ ಕಪ್ ಕ್ರಿಕೇಟ್ ಪಂದ್ಯಾವಳಿಯ ಪಾಕಿಸ್ಥಾನ - ನ್ಯೂಜಿಲೆಂಡ್, ಸೌತ್ ಆಫ್ರಿಕಾ - ವೆಸ್ಟ್ ಇಂಡೀಸ್, ಇಂಗ್ಲೆಂಡ್ - ಬಾಂಗ್ಲಾದೇಶ, ಸ್ಕಾಟ್ಲ್ಯಾಂಡ್ - ನಮೀಬಿಯಾ ತಂಡಗಳ ಕ್ರಿಕೆಟ್ ಪಂದ್ಯಗಳಿಗೆ ಸಂಬಂಧಪಟ್ಟಂತೆ ಲಾರ್ಡ್ಸ್ ಎಕ್ಸ್ಚೇಂಜ್.ಕಾಮ್, ಜೆಟ್ ಎಕ್ಸ್ಚೇಂಜ್.ಕಾಮ್,ಸ್ಕೈ ಎಕ್ಸ್ಚೇಂಜ್.ಕಾಮ್ ಎಂಬ ಆನ್ಲೈನ್ ಆಪ್ ಮತ್ತು ವೆಬ್ಸೈಟ್ಗಳ ಮೂಲಕ ಬೆಟ್ಟಿಂಗ್ ಚಟುವಟಿಕೆ ನೆಡೆಸಿದ್ದಾರೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಮೊಬೈಲ್ ಫೋನ್, ವ್ಯಾಟ್ಸ್ ಆಪ್ ಮೂಲಕ ಆನ್ಲೈನ್ನಲ್ಲಿ ಸಂಪರ್ಕಿಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಈ ಪಂದ್ಯಗಳ ಬಗ್ಗೆ ಕಟ್ಟಿದ್ದ ಹಣವನ್ನು ಗೆದ್ದವರಿಗೆ ನೀಡುವುದು ಮತ್ತು ಸೋತವರಿಂದ ಪಡೆದುಕೊಳ್ಳುತ್ತಾ ಹಣ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಈ ವ್ಯಕ್ತಿಗಳು ಸಾರ್ವಜನಿಕರಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆಯಿಂದ ಕಾನೂನುಬಾಹಿರವಾಗಿ ಮತ್ತು ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡಿರುವುದನ್ನು ಖಚಿತ ಮಾಹಿತಿ ಪಡೆದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಶೇಷ ವಿಚಾರಣಾ ದಳದ ಅಧಿಕಾರಿ ಹಾಗೂ ಸಿಬ್ಬಂದಿಯಗಳು ಮೂರು ಪ್ರತ್ಯೇಖ ತಂಡದಲ್ಲಿ ಕಾರ್ಯಾಚರಣೆ ನಡೆಸಿದ್ದರು ಎಂದಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ನಗರದ ನಿವಾಸಿಗಳಾದ ಓಂ ಪ್ರಕಾಶ್ ಸ್ಕೈ ಎಕ್ಸ್ಚೇಂಜ್.ಕಾಮ್ ಮೂಲಕ, ಸತ್ಪಾಲ್ ಸಿಂಗ್ ಜೆಟ್ ಎಕ್ಸ್ಚೇಂಜ್.ಕಾಮ್ ಎಂಬ ಆಪ್ ಮೂಲಕ ಗೇವರ್ ಚಂದ್ ಲಾರ್ಡ್ಸ್ ಎಕ್ಸ್ಚೇಂಜ್.ಕಾಮ್ ಎಂಬ ಆಪ್ ಮೂಲಕ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಯಲ್ಲಿ ತೊಡಗಿಸಿಕೊಂಡವರನ್ನು ವಶಕ್ಕೆ ಪಡೆದು ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಿಸಿದಂತೆ ಒಟ್ಟು ನಗದು ಹಣ 3.5 ಲಕ್ಷ ರೂ (ಮೂರು ಲಕ್ಷ ಐವತ್ತು ಸಾವಿರ ) ಹಾಗೂ ಹಲವು ಆನ್ಲೈನ್ ಗೇಮ್ ಇನ್ ಸ್ಟಾಲ್ ಮಾಡಿಕೊಂಡು ಬೆಟ್ಟಿಂಗ್ ಆಟಕ್ಕೆ ಉಪಯೋಗಿಸುತ್ತಿದ್ದ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರತ್ಯೇಖವಾಗಿ 3 ಪ್ರಕರಣಗಳು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಹೇಳಿದ್ದಾರೆ.
ಈ ಕಾರ್ಯಚರಣೆಯನ್ನು ಬೆಂಗಳೂರು ಸಿಸಿಬಿ ಉಪ ಪೊಲೀಸ್ ಆಯುಕ್ತ ಕೆ.ಪಿ.ರವಿಕುಮಾರ್, ಮಾರ್ಗದರ್ಶನದಲ್ಲಿ ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ಎನ್.ಹನುಮಂತರಾಯ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ರವಿ ಪಾಟೀಲ್, ಜಿ.ಶಿವಪ್ರಸಾದ್, ಐ ರಹೀಂ ಮತ್ತು ಸಿಬ್ಬಂದಿಗಳು ಕೈಗೊಂಡಿದ್ದರು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.