ನಮ್ಮ ವಿರುದ್ಧ ಯಾವುದೇ ಷಡ್ಯಂತ್ರ ನಡೆಸಿದರೂ ಗೋ ರಕ್ಷಣೆ ಮಾತ್ರ ಕೈಬಿಡುವುದಿಲ್ಲ. ಗೋ ಮಾತೆ ರಕ್ಷಣೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಕಲಬುರ್ಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಗಂಗ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಮಠದಲ್ಲಿ ಆಯೋಜಿಸಿದ್ದ ಮಂಗಲ ಯಾತ್ರೆ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಗೋ ಸೇವೆಗೆ ಮುಂದಾಗುವವರ ಮೇಲೆ ಪ್ರಕರಣಗಳು ದಾಖಲಾಗುತ್ತಿವೆ. ಮಠ ಹಾಗೂ ಸ್ವಾಮೀಜಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಇವುಗಳನ್ನು ಮೆಟ್ಟಿನಿಲ್ಲುವ ಶಕ್ತಿ ನಮಗೆ ಗೋ ಮಾತೆ ನೀಡಿದ್ದಾಳೆ ಎಂದರು.
ಗೋ ಮಾತೆ ರಕ್ಷಣೆಗಾಗಿ ಎಂತಹ ಷಡ್ಯಂತ್ರಕ್ಕೂ ಎದೆವೊಡ್ಡಿ ಮುನ್ನುಗ್ಗುತ್ತೇವೆ. ಗೋ ರಕ್ಷಣೆಗಾಗಿ ಆಯೋಜಿಸಿರುವ ಮಂಗಳಯಾತ್ರಿಗೆ ರಾಜ್ಯದ ಒಂದು ಸಾವಿರ ಮಠಗಳು ಬೆಂಬಲ ಸೂಚಿಸಿವೆ ಎಂದು ಮಾಹಿತಿ ನೀಡಿದರು.
ಗೋ ರಕ್ಷಣೆ ಕುರಿತು ದೇಶದಲ್ಲಿ ಮೊದಲಿಗೆ ಧ್ವನಿ ಎತ್ತಿದ್ದ ಮಂಗಲಪಾಂಡೆ ಹೆಸರಿನಲ್ಲಿ ನಡೆಯುವ ಗೋ ಮಂಗಲಯಾತ್ರೆ ನವೆಂಬರ್ 8 ರಂದು ಬೆಂಗಳೂರಿನಿಂದ ಆರಂಭಗೊಳ್ಳುತ್ತಿದೆ ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ತಿಳಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.