ಬೆಂಗಳೂರು: ಕೊರೋನಾ ಮಹಾಮಾರಿ ಮತ್ತೆ ವಕ್ಕರಿಸಿದ್ದು, ಇನ್ನೇನು ಶಾಲೆ ಶುರುವಾಯ್ತು ಎನ್ನುವ ಖುಷಿಯಲ್ಲಿದ್ದ ಮಕ್ಕಳಿಗೆ ಬ್ಯಾಡ್ ನ್ಯೂಸ್ ಬಂದಿದೆ. ಶಾಲೆ ತೆರೆಯುವ ಬಗ್ಗೆ ಆರೋಗ್ಯ ಸಚಿವರು ನೀಡಿರುವ ಹೇಳಿಕೆ ಏನು ಇಲ್ಲಿದೆ ವಿವರ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈಗ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಈಗಾಗಲೇ ಕೊರೋನಾ ಟೆಸ್ಟಿಂಗ್ ಅರಂಭವಾಗಿದೆ. ಎಲ್ಲಾ ಕಡೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ನಡುವೆ ಇನ್ನೇನು ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಹೈಸ್ಕೂಲ್ ತರಗತಿಗಳನ್ನು ಆರಂಭಿಸಿವೆ. ಈ ನಡುವೆ ಕೊರೋನಾದಿಂದ ಮತ್ತೆ ಲಾಕ್ ಡೌನ್ ಆಗುತ್ತಾ ಎಂಬ ಆತಂಕ ಜನರಲ್ಲಿದೆ.
ಕೊರೋನಾ ಹೆಚ್ಚಾಗಿ ಹರಡುವ ಸಾಧ್ಯತೆಯಿರುವುದು ಶಾಲೆಗಳಲ್ಲಿ. ಹೀಗಾಗಿ ಶಾಲೆಗಳ ಆರಂಭ ಮುಂದೂಡುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಸುಳಿವು ನೀಡಿದ್ದು, ಸದ್ಯಕ್ಕೆ ಆತಂಕ ಬೇಡ. ಆದರೆ ಮುಂದೆ ಪರಿಸ್ಥಿತಿ ನೋಡಿಕೊಂಡು ಶಾಲೆ ತೆರೆಯಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದ್ದಾರೆ.