ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಈ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವುದು ಪಟಾಕಿ. ಆದರೆ, ಅದರ ಅನಾಹುತಗಳು ಕೆಲವೆಡೆ ಸಂಭ್ರಮಕ್ಕಿಂತ ಅನಾಹುತ ಸಂಭವಿಸಿದ್ದು ಇದೆ.
ಈ ಹಿನ್ನೆಲೆ ಪಟಾಕಿ ದುರಂತಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪಟಾಕಿ ಮಾರಾಟಗಾರರ ಸಭೆಯಲ್ಲಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆಯನ್ನ ನೀಡಿದ್ದಾರೆ.
ಕಳೆದ ಬಾರಿ ಅತ್ತಿಬೆಲೆಯಲ್ಲಿ ಹಾಗೂ ಮಾರ್ಕೆಟ್ ಭಾಗದಲ್ಲಿ ಪಟಾಕಿ ದುರಂತಗಳು ಆಗದ ಹಾಗೇ ಕಟ್ಟೆಚರ ವಹಿಸಲು ಪೊಲೀಸ್ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಯಾವುದೇ ಪಟಾಕಿ ಮಾರಾಟಗಾರರಿಗೆ ಮುಂಗಡವಾಗಿ ಪಟಾಕಿ ಸಂಗ್ರಹಕ್ಕೆ ಅವಕಾಶ ಇಲ್ಲ. ಬೇಡಿಕೆ ಹೆಚ್ಚಿದೆ ಎಂದು ಪಟಾಕಿ ಓವರ್ ಲೋಡ್ ಸಂಗ್ರಹ ಮಾಡಿಕೊಂಡಿದ್ದು ಕಂಡು ಬಂದರೆ ಕಾನೂನು ಕ್ರಮದ ಎಚ್ಚರಿಕೆಯನ್ನ ನೀಡಿದ್ದಾರೆ.
ಅತಿಯಾಗಿ ಪಟಾಕಿಗಳನ್ನ ಗೋಡೌನ್ಗಳಲ್ಲಿ ಸಂಗ್ರಹ ಮಾಡಿಕೊಂಡರೆ ಅನಾಹುತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಅನಾಹುತಗಳಿಗೆ ಆಸ್ಪದ ಕೊಡಬಾರದು ಅನ್ನೋ ಕಾರಣಕ್ಕೆ ಮುಂಚಿತವಾಗಿ ಪಟಾಕಿ ಸಂಗ್ರಹ ಮಾಡಿಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಪಟಾಕಿ ಮಾರಾಟಗಾರರಿಗೆ ಸೂಚನೆ ನೀಡಿದ್ದಾರೆ.
ಮಾರಾಟಗಾರರು ದೀಪಾವಳಿ ಹಬ್ಬಕ್ಕೆ 5 ದಿನ ಮುಂಚಿತವಾಗಿ ತಂದು ಐದು ದಿನಗಳ ಒಳಗಾಗಿ ಸ್ಟಾಕ್ ಖಾಲಿ ಮಾಡಿಕೊಳ್ಳಬೇಕು. ಸೆ.18 ರಿಂದ 22ರ ತನಕ ಒಟ್ಟು ಐದು ದಿನ ಪಟಾಕಿ ಮಾರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅನಧಿಕೃತವಾಗಿ ಗೋಡೌನ್ಗಳಲ್ಲಿ ಪಟಾಕಿ ಸಂಗ್ರಹಣೆ ಬಗ್ಗೆ ಬೀಟ್ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಒಂದು ವೇಳೆ ಪಟಾಕಿ ಸಂಗ್ರಹ ಮಾಡಿಕೊಂಡಿರುವುದು ಕಂಡು ಬಂದರೆ ಅಂತಹ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುತ್ತದೆ ಸೂಚನೆ ನೀಡಿದ್ದಾರೆ.