Publish Date: Thu, 26 Mar 2020 (17:33 IST)
Updated Date: Thu, 26 Mar 2020 (17:35 IST)
ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸ್ವಾಮೀಜಿಯೊಬ್ಬರು ಅಭಿಯಾನ ಕೈಗೊಂಡಿದ್ದಾರೆ.
ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಪ್ರಯತ್ನಗಳು ನಡೆಸುತ್ತಿವೆ. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಪೊಲೀಸ್ ಇಲಾಖೆಯು, ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದ ಶ್ರೀ ಸದಾಶಿವ ಸ್ವಾಮಿಗಳ ನೇತೃತ್ವದಲ್ಲಿ ಅಭಿಯಾನ ಕೈಗೊಳ್ಳುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಹಳೇ ಸೇಡಂ ಪಟ್ಟಣದ ವಿವಿಧ ಬಡವಾಣೆ ಮತ್ತು ಬೀದಿಗಳಲ್ಲಿ ಟಂಟಂ ವಾಹನದಲ್ಲಿ ಸಂಚರಿಸಿದ ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದ ಶ್ರೀ ಸದಾಶಿವ ಸ್ವಾಮೀಜಿಗಳು, ಧ್ವನಿವರ್ಧಕ ಮೂಲಕ ಕೊರೋನಾ ವೈರಸ್ ಹರಡದಂತೆ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
ಮಹಾಮಾರಿ ಕೊರೋನಾ ಸೋಂಕಿನಿಂದ ಕಲಬುರಗಿಯಲ್ಲಿ ಮೊದಲ ವ್ಯಕ್ತಿ ಮೃತಪಟ್ಟಿರುವುದು ತಮಗೆಲ್ಲ ತಿಳಿದ ಸಂಗತಿಯಾಗಿದೆ. ಸೋಂಕು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡುವುದು ಮುಖ್ಯವಾಗಿದೆ. ಕೊರೋನಾ ಸೊಂಕಿನ ಚೈನ್ ಮುರಿಯಬೇಕಾದರೆ ಸಾರ್ವಜನಿಕರು ಮನೆಯಲ್ಲಿರುವುದು ತುಂಬಾ ಅವಶ್ಯಕವಾಗಿದೆ. ಅನಗತ್ಯ ಮನೆಯಿಂದ ಹೊರಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.