Select Your Language

Notifications

webdunia
webdunia
webdunia
webdunia

860 ವಿದ್ಯಾರ್ಥಿಗಳು, 85 ಶಿಕ್ಷಕರಿಗೆ ಕೊರೋನಾ ಪಾಸಿಟಿವ್

860 ವಿದ್ಯಾರ್ಥಿಗಳು, 85 ಶಿಕ್ಷಕರಿಗೆ ಕೊರೋನಾ ಪಾಸಿಟಿವ್
bangalore , ಬುಧವಾರ, 12 ಜನವರಿ 2022 (21:40 IST)
ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ವಯಸ್ಕರಿಗಿಂತ ಮಕ್ಕಳೇ ಹೆಚ್ಚು ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ 1ರಿಂದ 10ನೇ ತರಗತಿ ಬೋಧಿಸುವ 77,041 ಶಾಲೆಗಳಲ್ಲಿ 1.04 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 860 ವಿದ್ಯಾರ್ಥಿಗಳು ಮತ್ತು 85 ಶಿಕ್ಷಕರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.
ಚಿಕ್ಕಮಗಳೂರು ವಸತಿ ಶಾಲೆಯಲ್ಲಿ ಕರೊನಾ ಸ್ಪೋಟಗೊಳ್ಳುತ್ತಿದ್ದಂತೆಯೇ ಇತರೆ ಜಿಲ್ಲೆಗಳಲ್ಲೂ ಸೋಂಕು ಹರಡಿತು.
ಈ ಹಿಂದೆ ಇದ್ದ ನೂರಿನ ಸಂಖ್ಯೆ ಇದೀಗ ಸಾವಿರ ಸಮೀಪಿಸುತ್ತಿದೆ. ಬೆಂಗಳೂರು ನಗರದಲ್ಲೇ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದರಿಂದ 1ರಿಂದ 9ನೇ ತರಗತಿವರೆಗೆ ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಶಿಕ್ಷಣ ಇಲಾಖೆಯು ರಾಜ್ಯದಲ್ಲಿರುವ 34 ಶೈಕ್ಷಣಿಕ ಜಿಲ್ಲೆಗಳಿಂದ ಮಾಹಿತಿ ಪಡೆದಿದ್ದು, ಬೆಳಗಾವಿಯಲ್ಲಿ ಅತಿ ಹೆಚ್ಚು 160 ಪ್ರಕರಣಗಳು ಕಂಡು ಬಂದಿವೆ. ಚಿಕ್ಕಮಗಳೂರಿನಲ್ಲಿ 144 ಇದೆ. ರಾಯಚೂರು ಮತ್ತು ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರಿಗೂ ಸೋಂಕು ಹರಡದೇ ಇರುವುದು ವಿಶೇಷವಾಗಿದೆ. ಇನ್ನೂ ಸೋಂಕಿಗೆ ಒಳಗಾಗಿರುವ 85 ಶಿಕ್ಷಕರಲ್ಲಿ ಹಾಸನದಲ್ಲಿ 24 ಹಾಗೂ ಚಿಕ್ಕಮಗಳೂರಿನಲ್ಲಿ 16 ಶಿಕ್ಷಕರಿದ್ದಾರೆ. ಬೆಂಗಳೂರಿನಲ್ಲಿ ಸದ್ಯ ಶಾಲೆಗಳನ್ನು ಬಂದ್ ಮಾಡಲಾಗಿದ್ದು, 10ನೇ ತರಗತಿ ಮಾತ್ರ ನಡೆಯುತ್ತಿದೆ. ಉಳಿದ ವಿದ್ಯಾರ್ಥಿಗಳಿಗೆ ಯಾವ ಮಾದರಿಯಲ್ಲಿ ತರಗತಿ ನಡೆಸಬೇಕೆಂಬುದನ್ನು ಕರೊನಾ ತಾಂತ್ರಿಕ ಸಲಹಾ ಸಮಿತಿ ನಿರ್ದೇಶನ ನೀಡಬೇಕಿದೆ. ಸದ್ಯ ಶಿಕ್ಷಣ ಇಲಾಖೆಯು ವಿದ್ಯಾಗಮ ಅನುಷ್ಠಾನ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಆನ್​ಲೈನ್​ನಲ್ಲಿ ತರಗತಿ ನಡೆಸಲು ಉಪಕರಣಗಳ ಅಲಭ್ಯತೆಯಿಂದ ನಡೆಸಲು ಸಾಧ್ಯವಾಗದೇ ಇರುವುದರಿಂದ ಚಂದನ ವಾಹಿನಿ ಪ್ರಸಾರ, ವಿದ್ಯಾಗಮ ಅಂತಹ ಕಾರ್ಯಕ್ರಮಗಳನ್ನು ರೂಪಿಸಿದೆ. ಚಂದನದಲ್ಲಿ ಪಾಠಗಳ ವಿಡಿಯೋವನ್ನು ಸೋಮವಾರಿಂದ ಶುಕ್ರವಾರದವರೆಗೆ ಬೋಧನೆ ಮಾಡಲು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ ನಿರ್ಧರಿಸಿದೆ. ವೇಳಾಪಟ್ಟಿಯನ್ನು ನೀಡಿದ್ದು, ಎಲ್ಲ ಶಾಲೆಗಳ ಶಿಕ್ಷಕರು ವೇಳಾಪಟ್ಟಿಯನ್ನು ತಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ತಲುಪುವಂತೆ ಸಂವಹನ ಸಾಧಿಸಿ, ನಿಗದಿತ ಸಮಯದಲ್ಲಿ ದೂರದರ್ಶನ ವೀಕ್ಷಿಸಲು ತಿಳಿಸುವಂತೆ ಇಲಾಖೆಯು ಶಿಕ್ಷಕರಿಗೆ ತಿಳಿಸಿದೆ. 
ರಾಜ್ಯದ ಯಾವುದೇ ತಾಲೂಕಿನಲ್ಲಿ ಸೋಂಕಿತ ಪ್ರಮಾಣ ಶೇ.5 ದಾಟಿದರೆ ಶಾಲೆ, ಕಾಲೇಜು ಮುಚ್ಚುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ತೀರ್ವನಿಸದೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕ್ರಮಜರುಗಲಿದೆ.
 
ಬಿ.ಸಿ.ನಾಗೇಶ್ ಶಿಕ್ಷಣ ಸಚಿವ
ಶಾಲೆ ಮುಚ್ಚುವುದು ನಮ್ಮ ಉದ್ದೇಶವಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಮತ್ತು ಪೌಷ್ಟಿಕತೆಗೆ ತೊಂದರೆಯಾಗುತ್ತದೆ. ಬುಧವಾರ ಜಿಲ್ಲಾಧಿಕಾರಿಗಳ ಜತೆಗೆ ಸಭೆ ನಡೆಸಿ ತೀರ್ವನಿಸುತ್ತೇವೆ.
 
ಡಾ.ವಿಶಾಲ್.ಆರ್ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ
 
15 ಸಾವಿರ ಗಡಿ ಸಮೀಪಿಸಿದ ಹೊಸ ಪ್ರಕರಣ
 
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದು, ಮಂಗಳವಾರ 14,473 ಸೋಂಕು ಪ್ರಕರಣಗಳು ವರದಿಯಾಗಿವೆ. ದಿನದ ಸೋಂಕು ಪ್ರಮಾಣ ದರ ಶೇ. 10.30ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 73 ಸಾವಿರ ಮೀರಿದೆ. ಬೆಂಗಳೂರಿನಲ್ಲಿ ಒಂದೇ ದಿನ ಅತೀ ಹೆಚ್ಚು 10,800 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ದಕ್ಷಿಣ ಕನ್ನಡ 583, ಮೈಸೂರು 562, ತುಮಕೂರು 332, ಮಂಡ್ಯ 263, ಉಡುಪಿ 250, ಧಾರವಾಡ 178, ಬೆಂಗಳೂರು ಗ್ರಾಮಾಂತರ 160, ಕೋಲಾರ 139, ಶಿವಮೊಗ್ಗ 136, ಹಾಸನ 121, ಕಲಬುರಗಿ 109, ಉತ್ತರ ಕನ್ನಡ 106, ಬಳ್ಳಾರಿ 101 ಸೋಂಕು ಪ್ರಕರಣಗಳು ವರದಿಯಾಗಿವೆ. ಉಳಿದ 16 ಜಿಲ್ಲೆಗಳಲ್ಲೂ ಸೋಂಕು ವ್ಯಾಪಿಸಿದ್ದು ಪ್ರಕರಣಗಳು ಎರಡಂಕಿಯಲ್ಲಿವೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಮೂವರು ಹಾಗೂ ಕೋಲಾರ ಮತ್ತು ಉತ್ತರ ಕನ್ನಡದಲ್ಲಿ ತಲಾ ಒಬ್ಬರಂತೆ ಐವರು ಮೃತಪಟ್ಟಿದ್ದು, ಸೋಂಕಿತರಲ್ಲಿ 1,356 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
 
ಶೇ.50 ಹಾಜರಾತಿ ಆದೇಶ:
ಸರ್ಕಾರಿ ವಿಮಾ ಇಲಾಖೆಯಲ್ಲಿ ಎ ವೃಂದದ ಅಧಿಕಾರಿಗಳನ್ನು ಹೊರತುಪಡಿಸಿ ಬಿ,ಸಿ,ಡಿ ವೃಂದದ ಸಿಬ್ಬಂದಿಗಳು ಶೇ.50 ಮಾತ್ರ ರೊಟೆಷನ್ ಸಿಸ್ಟಮ್ ಮೇಲೆ ಕಚೇರಿಯಲ್ಲಿ ಕೆಲಸ ಮಾಡುವಂತೆ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಎ ವೃಂದದ ಅಧಿಕಾರಿಗಳು ಕಚೇರಿಗೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಇಲಾಖೆ ಮುಖ್ಯಸ್ಥರು ಇಚ್ಛಿಸಿದ್ದಲ್ಲಿ ಅವರು ಬಯಸುವ ಅಧಿಕಾರಿ ಮತ್ತು ನೌಕರರು ಕಚೇರಿಗೆ ಹಾಜರಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
 
ಬೆಂಗಳೂರು:
ರಾಜ್ಯದಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದ್ದು, ವಯಸ್ಕರಿಗಿಂತ ಮಕ್ಕಳೇ ಹೆಚ್ಚು ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ 1ರಿಂದ 10ನೇ ತರಗತಿ ಬೋಧಿಸುವ 77,041 ಶಾಲೆಗಳಲ್ಲಿ 1.04 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 860 ವಿದ್ಯಾರ್ಥಿಗಳು ಮತ್ತು 85 ಶಿಕ್ಷಕರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

5 ಸಾವಿರ ಗಡಿಯತ್ತ ಓಮಿಕ್ರಾನ್: ರಾಜ್ಯದಲ್ಲಿ 14,473 ಹೊಸ ಕೇಸಸ್ ವರದಿ