Publish Date: Sun, 17 Oct 2021 (22:09 IST)
Updated Date: Sun, 17 Oct 2021 (22:12 IST)
ಬೆಂಗಳೂರು: ರಾಜ್ಯದಲ್ಲಿ ನಡೆದ ಕಾರ್ಮಿಕ ಅದಾಲತ್ ಮುಖೇನ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಇತ್ಯರ್ಥಗೊಂಡಿದ್ದು, 1.54 ಲಕ್ಷ ಕಾರ್ಮಿಕರಿಗೆ 89.05 ಕೋಟಿ ರೂ. ಪಾವತಿಯಾಗಿದೆ.
ಕೋವಿಡ್ ಸಹಾಯ ಧನ, ಕನಿಷ್ಠ ವೇತನ, ಪಿಂಚಣಿ, ಮಾಲೀಕ-ಕಾರ್ಮಿಕರ ನಡುವೆ ವಿವಾದ ಹಾಗೂ ವಿವಿಧ ಯೋಜನೆಗಳಡಿ ಸಹಾಯಧನ ಸೇರಿದಂತೆ 2.83 ಲಕ್ಷ ಪ್ರಕರಣಗಳಿಗೆ ಕಾರ್ಮಿಕ ಅದಾಲತ್ನಲ್ಲಿ ಮುಕ್ತಿ ಸಿಕ್ಕಿದೆ. ಈ ಕಾರ್ಯಕ್ರಮ ರಾಜ್ಯದ ಶ್ರಮಿಕ ವರ್ಗದಲ್ಲಿ ನವಚೈತನ್ಯ ಸಿಕ್ಕಿದೆ.
'ಕಾರ್ಮಿಕ ಅದಾಲತ್' ಮುಂದುವರೆಸಲು ನಿರ್ಧಾರ: ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಬಾಕಿ ಉಳಿದಿದ್ದ ಕಾರ್ಮಿಕರ ಸಮಸ್ಯೆಗಳು ಮತ್ತು ಪರಿಹಾರ ಅರ್ಜಿಗಳನ್ನು ಒಂದೇ ಬಾರಿಗೆ ವಿಲೇವಾರಿ ಮಾಡಲಾಗಿದೆ. ಈ ಯಶಸ್ಸಿನ ನಂತರ ಇದೀಗ ಪ್ರತಿ ತಿಂಗಳು ಇದೇ ಮಾದರಿ 'ಕಾರ್ಮಿಕ ಅದಾಲತ್'ಗಳನ್ನು ನಡೆಸಲು ಇಲಾಖೆ ನಿರ್ಧರಿಸಿದೆ.2.83 ಲಕ್ಷ ಅರ್ಜಿಗಳ ವಿಲೇವಾರಿ:
ಕಾರ್ಮಿಕರ ಸಹಾಯಧನ ಅರ್ಜಿ, ಪರಿಹಾರ ಅರ್ಜಿ ಸೇರಿದಂತೆ ಕೆಲ ವಿವಾದಗಳು ಅಂತ್ಯ ಕಾಣದೇ ವರ್ಷಾನುಗಟ್ಟಲೆಯಿಂದ ಬಾಕಿ ಇದ್ದುದುನ್ನು ಮನಗಂಡ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, 'ಕಾರ್ಮಿಕ ಅದಾಲತ್' ಕಾರ್ಯಕ್ರಮ ರೂಪಿಸುವ ಮೂಲಕ ಈ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಿದ್ದರು. ಇದರ ಫಲವಾಗಿ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಭಾರಿ ಪ್ರಚಾರದೊಂದಿಗೆ ನಡೆದ ಕಾರ್ಮಿಕ ಅದಾಲತ್ನಲ್ಲಿ 2.83 ಲಕ್ಷ ಅರ್ಜಿಗಳನ್ನು ವಿಲೇ ಮಾಡಲಾಗಿದೆ. 'ಕಾರ್ಮಿಕ ಅದಾಲತ್' ಯೋಜನೆ ಯಶಸ್ವಿ ಜಾರಿಗೆ ಅನುವಾಗುವಂತೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿತಲ್ಲದೇ, ತಾಲೂಕು ಮತ್ತು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಂದ ನಿಗದಿತ ಅರ್ಜಿಗಳ ವಿವರ ಮತ್ತು ಪರಿಹಾರದ ಕ್ರಮಗಳ ಬಗ್ಗೆ ಪದೇ ಪದೇ ಮಾಹಿತಿ ಪಡೆಯುವ ಮೂಲಕ ಕಾರ್ಯಕ್ರಮ ಅನುಷ್ಠಾನಕ್ಕೆ ಶ್ರಮಿಸಿದೆ.