Publish Date: Thu, 06 Mar 2025 (14:20 IST)
Updated Date: Thu, 06 Mar 2025 (14:30 IST)
ಕಲಬುರಗಿ: ಪಿಯು ವಿದ್ಯಾರ್ಥಿನಿ ಬದಲು ತಾನೇ ರಾಜ್ಯಶಾಸ್ತ್ರ ಪರೀಕ್ಷೆ ಬರೆದು ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಸಿಕ್ಕಿಬಿದಿದ್ದಾರೆ. ವಿಶೇಷವೆಂದರೆ ಮಲ್ಲಿಕಾರ್ಜುನ ಖರ್ಗೆ ಒಡೆತನದ ಮಿಲಿಂದ್ ಕಾಲೇಜಿನಲ್ಲಿ ಘಟನೆ ನಡೆದಿದೆ.
ದ್ವಿತೀಯ ಪಿಯು ಪರೀಕ್ಷೆ ಈಗ ಜಾರಿಯಲ್ಲಿದೆ. ನಿನ್ನೆ ರಾಜ್ಯಶಾಸ್ತ್ರ ಪರೀಕ್ಷೆ ನಡೆಯುತ್ತಿತ್ತು. ಮಿಲಿಂದ್ ಕಾಲೇಜಿನಲ್ಲಿ ಅರ್ಚನಾ ಎನ್ನುವ ವಿದ್ಯಾರ್ಥಿನಿ ಬದಲಿಗೆ ಕಾನೂನು ಪದವೀಧರೆಯೂ ಆಗಿರುವ ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣ ಪಾಟೀಲ್ ಎನ್ನುವವರು ಪರೀಕ್ಷೆ ಬರೆದಿದ್ದಾರೆ.
ವಿಶೇಷವೆಂದರೆ ದಲಿತ ನಾಯಕ ಎಂಬ ಖ್ಯಾತಿ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಒಡೆತನದ ಕಾಲೇಜಿನಲ್ಲಿ ನಡೆದಿರುವ ಈ ಅಕ್ರಮವನ್ನು ದಲಿತ ಸೇನೆಯೇ ಬಯಲಿಗೆಳೆದಿದೆ. ಸದ್ಯಕ್ಕೆ ಆರೋಪಿ ಸಂಪೂರ್ಣ ಪಾಟೀಲ್ ರನ್ನು ಬಂಧಿಸಲಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಖರ್ಗೆ ಕುಟುಂಬದವರ ಒಡೆತನದಲ್ಲೇ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಈ ಅಕ್ರಮವೆಸಗಿದ್ದಾರೆ ಎಂದರೆ ಸೂಕ್ತ ತನಿಖೆ ನಡೆದು ಶಿಕ್ಷೆಯಾಗಬಹುದೇ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.