ಸಾರ್ವಜನಿಕರಿಗೆ ಹತ್ತಿರವಾಗಿರುವ ಇಲಾಖೆಗಳ ಪ್ರಗತಿಯತ್ತ ಹೆಚ್ಚು ಗಮನ ನೀಡಿ ಎಂದು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಸಚಿವರಿಗೆ ನೀತಿ ಪಾಠ ಮಾಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲಾಖೆಯ ಕಾರ್ಯದರ್ಶಿಗಳಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳಿ. ಪ್ರಧಾನ ಕಾರ್ಯದರ್ಶಿಗಳ ಮೇಲೆ ದೂರುವುದು ಬೇಡ. ಸುಮ್ಮನೆ ದೂರು ನೀಡುವುದರಲ್ಲೇ ಸಮಯ ವ್ಯರ್ಥ ಮಾಡಬೇಡಿ ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕರಿಗೆ ಹತ್ತಿರವಾಗಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಕಂದಾಯ, ಗೃಹ, ಶಿಕ್ಷಣ, ಆರೋಗ್ಯ ಮತ್ತು ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸಿ. ಪ್ರತಿ ಜಿಲ್ಲೆಯಲ್ಲಿ ಕೆಡಿಪಿ ಸಭೆ ನಡೆಸಿ ಎಂದು ತಿಳಿಸಿದ್ದಾರೆ.
ರಾಜ್ಯ ಸಚಿವರು ಪ್ರತಿ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಸಾರ್ವಜನಿಕರ ಕುಂದುಕೋರತೆಗಳನ್ನು ಆಲಿಸಿ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ವರ್ಗಾವಣೆಯತ್ತ ಹೆಚ್ಚು ಗಮನ ನೀಡುವ ಬದಲು ಇರುವ ಅಧಿಕಾರಿಗಳಿಂದಲೇ ಕೆಲಸ ತೆಗೆದುಕೊಳ್ಳಿ. ಹೊಸ ಯೋಜನೆಗಳನ್ನು ರೂಪಿಸುಲುದು ಆಯಾ ಇಲಾಖೆಯ ಸಚಿವರೆ ಹೊಣೆ. ಈ ಎಲ್ಲ ಬೆಳವಣಿಗೆ ಕುರಿತು ಸಂಪುಟ ಸಭೆಯಲ್ಲಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಚುನಾವಣೆಗಳು ಹತ್ತಿರ ಬರುವ ಸಮಯ ಬಂದಿದೆ. ಎಲ್ಲಾ ಸಚಿವರು ಜಾಗೃತವಾಗಿ ಕೆಲಸ ನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಸಚಿವರಿಗೆ ತಿಳಿಸಿದ್ದಾರೆ.