Publish Date: Sat, 10 Jun 2017 (09:44 IST)
Updated Date: Sat, 10 Jun 2017 (09:46 IST)
ಬೆಂಗಳೂರು: ಗೋ ಹತ್ಯೆ ನಿಷೇಧ ವಿಚಾರದಲ್ಲಿ ರಾಜ್ಯದ ಅಧಿಕಾರದಲ್ಲಿ ಕೇಂದ್ರ ಮೂಗು ತೂರಿಸುವುದು ಬೇಡ ಎಂದು ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಧಾಗಾರಕ್ಕೆ ಜಾನುವಾರುಗಳನ್ನು ಮಾರಾಟ ಮತ್ತು ಖರೀದಿಸುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿ ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲೇ ಸಿಎಂ ಪ್ರಧಾನಿಗೆ ಪತ್ರ ಬರೆದಿದ್ದಾರೆ. ರೈತರ ಹಿತಾಸಕ್ತಿ ಮತ್ತು ರಾಜ್ಯದ ಅಧಿಕಾರದಲ್ಲಿ ಕೇಂದ್ರ ಮೂಗು ತೂರಿಸುವುದು ಬೇಡ ಎಂದು ಸಿಎಂ ಪತ್ರದಲ್ಲಿ ಕಟುವಾಗಿ ಬರೆದಿದ್ದಾರೆ.
ಕೇಂದ್ರದ ನಿರ್ಧಾರದಿಂದ ದೇಶದ ಸಾಮಾಜಿ ಮತ್ತು ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಜಾನುವಾರುಗಳ ಮಾರಾಟ ಮಾಡುವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಯಸ್ಸಾದ ಜಾನುವಾರುಗಳನ್ನು ಮನೆಯಲ್ಲೇ ಇಟ್ಟುಕೊಳ್ಳುವುದರಿಂದ ರೈತರಿಗೆ ಆರ್ಥಿಕ ಹೊರೆ ಬೀಳುತ್ತದೆ. ಇನ್ನು, ಗೋ ಮಾಂಸ ಬಡವರ ಆಹಾರ. ಹಾಗಾಗಿ ಈ ಕಾಯಿದೆಯ ಪುನರ್ ಪರಿಶೀಲನೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.