ಬೆಂಗಳೂರು: ಕಾಂಗ್ರೆಸ್ ಮೇಲಿನ ದಾಳಿಯೆಂದರೆ ಭಾರತದ ಇತಿಹಾಸದ ಮೇಲಿನ ದಾಳಿಯಿದ್ದಂತೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯವರ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಹುಲ್, ಕಾಂಗ್ರೆಸ್ ಸಿದ್ಧಾಂತವೂ ಕ್ರಾಂತಿಕಾರಿಯಾಗಿದೆ. ನಾವು ಬ್ರಿಟಿಷರ ವಿರುದ್ಧ ಅಹಿಂಸಾ ಮಾರ್ಗದ ಮೂಲಕ ಹೋರಾಟ ಮಾಡಿದ್ದೆವು. ಆದರೆ ಈಗ ಬಿಜೆಪಿ ಮತ್ತು ಆರ್ ಎಸ್ಎಸ್ ನಿಂದ ಆ ಸಿದ್ಧಾಂತದ ಮೇಲೆ ದಾಳಿಯಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ನ ಮೂಲ ಸಿದ್ಧಾಂತ ರಕ್ಷಣೆ ಇಂದಿನ ತುರ್ತು ಅಗತ್ಯ ಎಂದು ರಾಹುಲ್ ಹೇಳುತ್ತಾರೆ.
ಈ ವಿಡಿಯೋ ಹಂಚಿಕೊಂಡಿರುವ ಸಿದ್ದರಾಮಯ್ಯ ಕಾಂಗ್ರೆಸ್ ಮೇಲಿನ ದಾಳಿ ಭಾರತದ ಇತಿಹಾಸದ ಮೇಲಿನ ದಾಳಿಯಿದ್ದಂತೆ, ಈ ನೆಲದ ಉದಾತ್ತ ಚಿಂತನೆಗಳು ಮತ್ತು ಆದರ್ಶ ಚಿಂತನೆಗಳ ಮೇಲಿನ ದಾಳಿಯಿದ್ದಂತೆ ಎಂದಿದ್ದಾರೆ.
ಕಾಂಗ್ರೆಸ್ ರಕ್ಷಣೆಗೆ ಧಾವಿಸಬೇಕಿರುವುದು ದೇಶದ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟಿರುವ ಪ್ರತಿಯೊಬ್ಬರ ಕರ್ತವ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.