Publish Date: Tue, 03 Sep 2024 (10:39 IST)
Updated Date: Tue, 03 Sep 2024 (10:45 IST)
ಮೈಸೂರು: ಸಿಎಂ ಸಿದ್ದರಾಮಯ್ಯ ನಿನ್ನೆ ಸಂಜೆಯೇ ತವರು ಮೈಸೂರಿಗೆ ಹೋಗಿದ್ದು, ಈ ಭೇಟಿಯ ಹಿಂದೆ ಬೇರೆಯೇ ಉದ್ದೇಶವಿದೆ ಎಂದು ಈಗ ಬಯಲಾಗಿದೆ.
ಮುಡಾ ಹಗರಣ ಪ್ರಕರಣದಲ್ಲಿ ಕೊಂಚ ನಿರಾಳತೆ ಸಿಕ್ಕ ಬಳಿಕ ಸಿಎಂ ಸಿದ್ದರಾಮಯ್ಯ ಇಂದು ತಾಯಿ ಚಾಮುಂಡಿ ದರ್ಶನ ಮಾಡಲೆಂದೇ ಮೈಸೂರಿಗೆ ತೆರಳಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಸಿದ್ದರಾಮಯ್ಯ ಮೈಸೂರು ಭೇಟಿ ಹಿಂದೆ ಮತ್ತೊಂದು ಉದ್ದೇಶವೂ ಇದೆ ಎಂದು ತಿಳಿದುಬಂದಿದೆ.
ಮೈಸೂರಿನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಲಿದೆ. ಮೈಸೂರಿಗೆ ಇಂದು ಸಿಎಂ ಭೇಟಿಯ ಮುಖ್ಯ ಉದ್ದೇಶವೇ ಇದಾಗಿದೆ. ಈ ಸಭೆಗೆ ಮುನ್ನ ಅವರು ಚಾಮುಂಡಿ ತಾಯಿಯ ದರ್ಶನ ಪಡೆಯಲಿದ್ದಾರೆ.
ಆದರೆ ಈ ಸಭೆ ನಡೆಸುವುದಕ್ಕೆ ರಾಜಮಾತೆ ಪ್ರಮೋದಾ ದೇವಿ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಾಧಿಕಾರದ ವತಿಯಿಂದ ಪ್ರಮೋದಾ ದೇವಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಸಭೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ವಿಚಾರ ಕೋರ್ಟ್ ನಲ್ಲಿದೆ. ಹೀಗಿದ್ದರೂ ಸಭೆ ನಡೆಸುತ್ತಿರುವುದು ಕಾನೂನು ಬಾಹಿರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.