Publish Date: Fri, 17 Jan 2025 (09:38 IST)
Updated Date: Fri, 17 Jan 2025 (09:46 IST)
ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಕಳಂಕಿತರಾಗಿ ರಾಜೀನಾಮೆ ನೀಡಿದ್ದ ಮಾಜಿ ಸಚಿವ ನಾಗೇಂದ್ರರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಶತಪ್ರಯತ್ನ ನಡೆಸುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ನಲ್ಲಿ ಈಗ ಸಚಿವ ಸಂಪುರ ಪುನರಾಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸಿಎಂ ಬದಲಾವಣೆ ಕುರಿತು ಒಳಗೊಳಗೇ ಕಸರತ್ತು ನಡೆಯುತ್ತಿದೆ. ಇದರ ನಡುವೆ ಸಿಎಂ ಸಂಪುಟ ಪುನರಾಚನೆಗೆ ಸಿದ್ಧತೆ ನಡೆಸಿದ್ದು ತಮ್ಮ ಆಪ್ತ ನಾಗೇಂದ್ರರನ್ನು ಮತ್ತೆ ಸೇರಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ.
ಬಹಿರಂಗವಾಗಿಯೇ ರಾಜ್ಯ ಸರ್ಕಾರದ ಬಗ್ಗೆ, ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿರುವ ಕೆಲವು ಸಚಿವರಿಗೆ ಕೊಕ್ ನೀಡಿ ಬಾಲ ಕಟ್ ಮಾಡಲು ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ. ಸಚಿವ ಸಂಪುಟ ಪುನರಾಚನೆ ನೆಪದಲ್ಲಿ ಅಂತಹ ಸಚಿವರನ್ನು ಕಿತ್ತು ಹಾಕಿ ತಮ್ಮ ಆಪ್ತರಾದ ನಾಗೇಂದ್ರ ಸೇರಿದಂತೆ ತಮಗೆ ನಿಷ್ಠರಾದವರಿಗೆ ಸಚಿವ ಪಟ್ಟ ನೀಡಲು ತಯಾರಿ ನಡೆಸಿದ್ದಾರೆ.
ಹೈಕಮಾಂಡ್ ಸೂಚನೆ ನೀಡಿದರೂ ಕೆಲವು ಸಚಿವರು ಬಹಿರಂಗವಾಗಿಯೇ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ. ಇದನ್ನು ತಪ್ಪಿಸಲು ಮತ್ತು ತಮ್ಮ ಸ್ಥಾನಕ್ಕೆ ಕುತ್ತು ತರುವವರ ಬಾಯಿಗೆ ಬೀಗ ಹಾಕುವ ಪ್ಲ್ಯಾನ್ ಸಿಎಂರದ್ದು ಎನ್ನಲಾಗಿದೆ.