Publish Date: Wed, 22 Feb 2017 (09:34 IST)
Updated Date: Wed, 22 Feb 2017 (09:37 IST)
ಪಾಪಿ ಮಗನೊಬ್ಬ ತನ್ನ ತಾಯಿಯ ತಲೆ ಕಡಿದು ಮನೆ ಬಾಗಿಲಲ್ಲಿಟ್ಟ ಬೀಭತ್ಸ, ಘೋರ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯಲ್ಲಿ ನಡೆದಿದ್ದು ಸಂಪೂರ್ಣ ಜಿಲ್ಲೆ ಬೆಚ್ಚಿಬಿದ್ದಿದೆ.
ದೇವರ ಆದೇಶದಂತೆ ತಾನು ಈ ಕೃತ್ಯವನ್ನು ಮಾಡಿದ್ದೇನೆ ಎಂದು ಆರೋಪಿ ತಿಮ್ಮರಾಜು ಹೇಳುತ್ತಿದ್ದು ಮೃತ ಸಾವಿತ್ರಮ್ಮ 60 ವರ್ಷ ಪ್ರಾಯದವರಾಗಿದ್ದಾರೆ.
ನಿನ್ನೆ ರಾತ್ರಿ ತಾಯಿಯ ರುಂಡವನ್ನು ಕಡಿದು ಹತ್ಯೆ ಮಾಡಿದ ತಿಮ್ಮರಾಜು, ರುಂಡವನ್ನು ಬಾಗಿಲ ಬಳಿ ಇಟ್ಟು ಬಳಿಕ ಅದಕ್ಕೆ ಹೂವು, ಕುಂಕುಮ ಹಾಕಿ ಪೂಜೆ ಮಾಡಿದ್ದಾನೆ.
ತಿಮ್ಮರಾಜುವಿನ ಕೃತ್ಯದಿಂದ ಬೆಚ್ಚಿಬಿದ್ದ ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಹೊಳಲ್ಕೆರೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ತನಿಖೆ ವೇಳೆ ತಿಮ್ಮರಾಜು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು ದೇವರು ಮೇಮೇಲೆ ಬಂದು ಈ ರೀತಿ ಮಾಡೆಂದು ಹೇಳಿದ, ಹೀಗಾಗಿ ಕೊಲೆಗೈದೆ ಎಂದಿದ್ದಾನೆ.
ಎರಡು ವರ್ಷದ ಹಿಂದೆ ಪತ್ನಿ ದೂರವಾದ ಬಳಿಕ ತಿಮ್ಮರಾಜು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಸದಾ ತಾಯಿಯೊಂದಿಗೆ ಜಗಳವಾಡಿಕೊಂಡಿರುತ್ತಿದ್ದ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.