Publish Date: Fri, 16 Feb 2018 (10:32 IST)
Updated Date: Fri, 16 Feb 2018 (10:46 IST)
ನವದೆಹಲಿ: ಕೊನೆಗೂ ಬಹು ನಿರೀಕ್ಷಿತ ಕಾವೇರಿ ನದಿ ನೀರು ವಿವಾದದ ಅಂತಿಮ ತೀರ್ಪು ಬಂದಿದೆ. ಸುಪ್ರೀಂ ಕೋರ್ಟ್ ಇದೀಗ ತಾನೇ ಅಂತಿಮ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ 14.5 ಟಿಎಂಸಿ ನೀರು ಬಿಡಲಿದೆ.
ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಈ ಅಂತಿಮ ತೀರ್ಪು ನೀಡಿದೆ. ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಂತಿಮ ತೀರ್ಪು ಪ್ರಕಟಿಸಿದ್ದು, ಆರಂಭದಲ್ಲೇ ಕರ್ನಾಟಕಕ್ಕೆ ಸಂವಿಧಾನದ ಅಡಿಯಲ್ಲಿ ಚೌಕಾಸಿ ಮಾಡುವ ಅಧಿಕಾರವಿದೆ ಎಂದರು.
‘ನ್ಯಾಯಾಧಿಕರಣ ಅನುಸರಿಸಿದ ಕ್ರಮ ಸರಿಯಾಗಿದೆ. ನದಿಗಳು ರಾಷ್ಟ್ರೀಯ ಸಂಪತ್ತು. ಯಾವುದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸ್ಥಾಪನೆ ಮಾಡುವಂತಿಲ್ಲ. ಎರಡೂ ರಾಜ್ಯಗಳು ಸಮಾನ ಹಂಚಿಕೆ ಮಾಡಬೇಕು. ಪುದುಚೇರಿ ಮತ್ತು ಕೇರಳಕ್ಕೆ ನೀಡುವ ನೀರು ಹಂಚಿಕೆಯಲ್ಲಿ ಬದಲಾವಣೆಯಿಲ್ಲ. ಈ ರಾಜ್ಯಗಳಿಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು.
ಕರ್ನಾಟಕ ತಮಿಳು ನಾಡಿಗೆ ಇನ್ನು ಮುಂದೆ 177 ಟಿಎಂಸಿ ನೀರು ಬಿಡಬೇಕು. ಈ ಮೊದಲು ಇದು 192 ಟಿಎಂಸಿ ಇತ್ತು’ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಇದರೊಂದಿಗೆ ಕರ್ನಾಟಕಕ್ಕೆ ಕೊಂಚ ಮಟ್ಟಿನ ರಿಲೀಫ್ ಸಿಕ್ಕಿದೆ.
ಇದಲ್ಲದೆ ಕರ್ನಾಟಕ ಹೆಚ್ಚುವರಿ ಪ್ರದೇಶದಲ್ಲಿ ನೀರಾವರಿ ಮಾಡಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಭಾಗಶಃ ಗೆಲುವು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ