Publish Date: Sun, 13 Mar 2022 (20:29 IST)
Updated Date: Sun, 13 Mar 2022 (20:33 IST)
ತನ್ನ ಸ್ವಂತ ಪರಿಶ್ರಮದಿಂದ ಅರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಲು ಮುಂದಾಗಬೇಕಿದೆ ಎಂದು ಕಡಗದಾಳು ಸರ್ಕಾರಿ ಪ್ರೌಢಶಾಲೆ ಯ ಶಿಕ್ಷಕಿ ಎಸ್.ಡಿ.ಅನಿತಾ ಅಭಿಪ್ರಾಯಪಟ್ಟರು.
ಭಾರತ ಸರ್ಕಾರದ ನೆಹರು ಯುವ ಕೇಂದ್ರ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ , ಭಾರತೀ ಸಂಯುಕ್ತ ಪದವಿಪೂರ್ವ ಕಾಲೇಜು ಮರಗೋಡು ಹಾಗೂ ಹುಲಿತಾಳದ ಭಗತ್ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ವೃತ್ತಿ ಮಾರ್ಗದರ್ಶನ ಮತ್ತು ಕೌನ್ಸೆಲಿಂಗ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯದಲ್ಲಿ ಮುಂದಿನ ಅಧ್ಯಯನ ಮುಂದುವರಿಸಿದಲ್ಲಿ ದೊರೆಯಬಹುದಾದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಲಭ್ಯವಿರುವ ಹತ್ತು ಹಲವು ಕಲಿಕಾ ಕೋರ್ಸ್ಗಳು ಮತ್ತು ಅದರಿಂದ ಲಭ್ಯವಾಗುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಟ್ಟರು. ಇಂದಿನ ಯುವಜನಾಂಗಕ್ಕೆ ಸ್ಕಿಲ್ ಇಂಡಿಯಾದಂತಹ ಯೋಜನೆಗಳ ಬಗ್ಗೆ ಪೂರ್ಣ ಅರಿವು ಇರಬೇಕು. ಅಂತಹ ಯೋಜನೆಗಳಲ್ಲಿನ ವೈವಿಧ್ಯಮಯ ಉದ್ಯೋಗಾಧಾರಿತವಾದ ತರಬೇತಿಗಳು ಹಾಗೂ ಬ್ಯಾಂಕಿನಿಂದ ಇರುವ ಸಾಲ ಸೌಲಭ್ಯಗಳು ಬದುಕು ಕಟ್ಟಿಕೊಡಲು ನೆರವಾಗುತ್ತವೆ ಎಂದರು.
ಗಳಿಕೆಯ ಕಾಲದಲ್ಲಿ ಕಲಿಕೆಯನ್ನು ದೂರಶಿಕ್ಷಣದ ಮೂಲಕ ಸಾಧಿಸಬಹುದಾಗಿದೆ. ಕೊಡಗಿನಲ್ಲಿ ಸ್ವ ಉದ್ಯೋಗದಲ್ಲಿ ಯಶಸ್ಸು ಕಂಡವರ ಉದಾಹರಣೆಯನ್ನು ನೀಡಿ, ಯಾವ ಉದ್ಯೋಗವೂ ಕೀಳಲ್ಲ ಎಂಬ ಭಾವನೆ ಅತಿಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಲಿತಾಳದ ಭಗತ್ ಯುವಕ ಸಂಘದ ಅಧ್ಯಕ್ಷರಾದ ಹೆಚ್.ಎಂ.ವಿನೋದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆರ್.ಸುರೇಶ್ ನಾಯಕ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಹಾಕತ್ತೂರು ಗ್ರಾಮ ಪಂಚಾಯತ್ ಸದಸ್ಯ ಬಿ.ವಿ.ಯೋಗೇಶ್ ಹಾಗೂ ಭಾರತಿ ಹೈಸ್ಕೂಲ್ ಸೊಸೈಟಿ ಆಡಳಿತ ಮಂಡಳಿಯ ನಿರ್ದೇಶಕರಾದ ಪಿ.ಎಂ.ಶರತ್ ಉಪಸ್ಥಿತರಿದ್ದರು. ಪಿ.ಎಸ್.ರವಿಕೃಷ್ಣ ನಿರ್ವಹಿಸಿದರು.