Publish Date: Fri, 30 Aug 2024 (10:41 IST)
Updated Date: Fri, 30 Aug 2024 (10:47 IST)
ಬೆಂಗಳೂರು: ಬರ್ತ್ ಡೇ ಇರಲಿ, ಆನಿವರ್ಸರಿ ಇರಲಿ, ಏನೇ ಸಂಭ್ರಮವಿದ್ದಾಗ ಕೇಕ್ ಕಟ್ ಮಾಡಿ ಸಂಭ್ರಮಿಸುವುದು ಸಹಜ. ಆದರೆ ಸಂಭ್ರಮದ ನೆಪದಲ್ಲಿ ನೀವು ಚಪ್ಪರಿಸಿಕೊಂಡು ತಿನ್ನುವ ಕೇಕ್ ಗೆ ಸದ್ಯದಲ್ಲೇ ನಿಷೇಧವಾದರೂ ಅಚ್ಚರಿಯಿಲ್ಲ.
ಕೆಲವು ದಿನಗಳ ಹಿಂದೆ ಆರೋಗ್ಯ ಇಲಾಖೆ ಹಾನಿಕಾರಕ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಗೋಬಿ ಮಂಚೂರಿ, ಪಾನಿ ಪೂರಿಗೆ ಕಡಿವಾಣ ಹಾಕಿತ್ತು. ಕೃತಕ ಬಣ್ಣಗಳನ್ನು ಬಳಸದೇ, ಕೆಲವೊಂದು ಷರತ್ತುಗಳನ್ನು ಪಾಲಿಸಿದರೆ ಮಾತ್ರ ಮಾರಾಟಕ್ಕೆ ಅವಕಾಶ ಎಂದು ನಿಬಂಧನೆ ಹಾಕಿತ್ತು.
ಇದೀಗ ಕೇಕ್ ಗೂ ಅದೇ ಗತಿಯಾಗುವ ಸಾಧ್ಯತೆಯಿದೆ. ಕೇಕ್ ಕಲರ್ ಫುಲ್ ಆಗಿ ಕಾಣಲು ಬಣ್ಣದ ಬಳಕೆ ಮಾಡಲಾಗುತ್ತದೆ. ಆದರೆ ಈಗ ರಾಜ್ಯ ಆರೋಗ್ಯ ಇಲಾಖೆ ಸುಮಾರು 264 ಕಡೆಗಳಿಂದ ಕೇಕ್ ಸ್ಯಾಂಪಲ್ ಪಡೆದುಕೊಂಡು ಪರೀಕ್ಷೆಗೊಳಪಡಿಸಲು ಕಳುಹಿಸಲಾಗಿದೆ. ಇವುಗಳಲ್ಲಿ ಹಾನಿಕಾರಕ ಅಂಶವಿದೆಯೇ ಎಂದು ಪತ್ತೆ ಹಚ್ಚಲಾಗುತ್ತಿದೆ.
ಒಂದು ವೇಳೆ ಹಾನಿಕಾರಕ ಅಂಶ ಪತ್ತೆಯಾದರೆ ಬೇಕರಿಯಲ್ಲಿ ಸಿಗುವ ಕೆಲವೊಂದು ಆಹಾರ ವಸ್ತುಗಳ ಮೇಲೂ ನಿರ್ಬಂಧ ಹೇರಬೇಕಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಒಂದು ವೇಳೆ ಹಾನಿಕಾರಕ ಅಂಶ ಪತ್ತೆಯಾದರೆ ಕೇಕ್ ಮಾರಾಟವಾಗಬಹುದಾದರೂ ಅದರಲ್ಲಿ ಮೊದಲಿನ ಸ್ವಾದ ಇರದು.