Publish Date: Mon, 18 Nov 2024 (14:47 IST)
Updated Date: Mon, 18 Nov 2024 (14:49 IST)
ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ವಿಚಾರ ಈಗ ಭಾರೀ ಸುದ್ದಿಯಾಗಿದೆ. ಇದರ ನಡುವೆ ನಾಳೆಯಿಂದಲೇ ಬಿಪಿಎಲ್ ಕಾರ್ಡ್ ಬದಲಾವಣೆ ಆರಂಭವಾಗಲಿದೆ. ಇಲ್ಲಿದೆ ಇದರ ಬಗ್ಗೆ ಮಾಹಿತಿ.
ಬಿಪಿಎಲ್ ಕಾರ್ಡ್ ಅರ್ಹರಿಗೆ ಮಾತ್ರ ಲಭಿಸಬೇಕು. ಬಡವರಿಗೆ ಬಿಪಿಎಲ್ ಕಾರ್ಡ್ ನ ಫಲ ಸಿಗಬೇಕು ಎಂಬುದು ನಮ್ಮ ಉದ್ದೇಶ. ಬಡವರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಆದರೆ ರಾತ್ರೋ ರಾತ್ರಿ ಬಿಪಿಎಲ್ ನಿಂದ ಎಪಿಎಲ್ ಆಗಿ ಬದಲಾವಣೆಯಾಗಿರುವುದರ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ.
ಇದರ ನಡುವೆ ನಾಳೆಯಿಂದಲೇ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಶುರು ಮಾಡಲಿದೆ. ಯಾರು ತೆರಿಗೆ ಕಟ್ಟುತ್ತಾರೋ, ಐಟಿ ಜೊತೆಗೆ ಜಿಎಸ್ ಟಿ ಇರುವ 10 ಸಾವಿರ ಕಾರ್ಡ್ ಗಳನ್ನು ರದ್ದಾಗಿದೆ. ನಾಳೆಯಿಂದಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯಾಚರಣೆ ಶುರು ಮಾಡಲಿದೆ.
ಉಳ್ಳವರಿಗೆ ಬಿಪಿಎಲ್ ಕಾರ್ಡ್ ನ ಅಗತ್ಯವಿಲ್ಲ ಎನ್ನುವುದು ಸರಿಯಾದ ಕ್ರಮವಾಗಿದೆ. ಆದರೆ ಇದರ ನಡುವೆ ಕೆಲವರಿಗೆ ಬಡವರಿಗೂ ಅನ್ಯಾಯವಾಗಿರುವ ಘಟನೆಗಳು ಕೇಳಿಬಂದಿವೆ. ದಿನದ ವೇತನ ನಂಬಿಕೊಂಡು ಬದುಕುವವರಿಗೆ ಈಗ ಬಿಪಿಎಲ್ ನಿಂದ ಏಕಾಏಕಿ ಎಪಿಎಲ್ ಗೆ ಬದಲಾವಣೆಯಾಗಿರುವುದರಿಂದ ತೊಂದರೆಯಾಗಿದೆ. ಅಂತಹವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಲಿ ಎನ್ನುವುದೇ ಎಲ್ಲರ ಆಶಯ.
ಇನ್ನೊಂದೆಡೆ ಆಹಾರ ಮತ್ತು ನಾಗರಿಕಾ ಇಲಾಖೆ ಸಚಿವ ಕೆಎಚ್ ಮುನಿಯಪ್ಪ, ಯಾವುದೇ ಕಾರಣಕ್ಕೂ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದಾಗಲ್ಲ. ಕೆಲವರು ಬಿಪಿಎಲ್ ಗೆ ಅರ್ಹರಲ್ಲದವರಿದ್ದಾರೆ. ಅವರನ್ನು ತೆಗೆದು ಎಪಿಎಲ್ ಗೆ ಹಾಕ್ತೀವಷ್ಟೇ. ಆದರೆ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಇದು ರಾಜಕೀಯವಾಗಿ ಮಾತನಾಡುತ್ತಿದ್ದಾರಷ್ಟೇ ಎಂದು ಹೇಳಿದ್ದಾರೆ.