Publish Date: Sat, 24 Dec 2022 (19:21 IST)
Updated Date: Sat, 24 Dec 2022 (19:23 IST)
ಒಂದು ಕಡೆ 2 ವರ್ಷಗಳ ನಂತ್ರ ಜನರು ಹೊಸವರ್ಷವನ್ನ ಬರ ಮಾಡಿಕೊಳ್ಳೋಕೆ ತಯಾರಾಗಿ ಕುಳಿತಿದ್ದಾರೆ. ಮತ್ತೊಂದು ಕಡೆ ನ್ಯೂ ಇಯರ್ ಸೆಲಬ್ರೇಷನ್ ಮೇಲೆ ಉಗ್ರರ ಕರಿ ನೆರಳು ಬೀಳಬಹುದು ಅನ್ನೋ ಎಚ್ಚರಿಕೆಯ ಕರೆ ಗಂಟೆ ಗುಪ್ತಚರ ಇಲಾಖೆಯಿಂದ ಸಿಕ್ಕಿದೆ. ಜೊತೆಗೆ ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸರ ಹದ್ದಿನ ಕಣ್ಣು ಇಟ್ಟಿದ್ದಾರೆ.
ಕೊರೋನಾ ಕಾರಣದಿಂದಾಗಿ ಕಳೆದ 2 ವರ್ಷಗಳಿಂದ ಸಿಲಿಕಾನ್ ಸಿಟಿಯಲ್ಲಿ ನ್ಯೂಇಯರ್ ಸೆಲಬ್ರೇಷನ್ಗೆ ಬ್ರೇಕ್ ಬಿದಿತ್ತು. ಈ ಹಿನ್ನಲೆಯಲ್ಲಿ ಈ ಸಲ ಅದ್ಧೂರಿಯಾಗಿ ಹೊಸ ವರ್ಷವನ್ನ ಸ್ವಾಗತಿಸಲು ಸಿಲಿಕಾನ್ ಸಿಟಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಗುಪ್ತಚರ ಇಲಾಖೆ ಎಚ್ಚರಿಕೆಯ ಕರೆಗಂಟೆಯನ್ನ ನೀಡಿದೆ. ಹೌದು, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳು ಹಾಗೂ ನಗರದಲ್ಲಿ ಶಂಕಿತರ ಬಂಧನದ ಹಿನ್ನೆಲೆಯಲ್ಲಿ ಕೆಲವು ಸಮಾಜಘಾತುಕ ಚಟುವಟಿಕೆಗಳು ಶಾಂತಿಭಂಗ ಉಂಟುಮಾಡುವ ಸಾಧ್ಯತೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅನುಮಾನಾಸ್ಪದವಾಗಿ ಕಾಣಿಸಿಕೊಳ್ಳುವವರ ಮೇಲೆ ನಿಗಾವಹಿಸುವುದು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಮೀಷನರ್ ಕಚೇರಿಯಿಂದ ಸೂಚನೆ ಸಿಕ್ಕಿದೆ. ಆಯಾ ಠಾಣೆಯ ಎಲ್ಲ ಹೊಯ್ಸಳ ಮತ್ತು ಚೀತಾಗಳು ಠಾಣಾ ವ್ಯಾಪ್ತಿಯಲ್ಲಿ ಚುರುಕಾದ ಗಸ್ತು ಕರ್ತವ್ಯ ಮಾಡಬೇಕು ಹಾಗೂ ಗಸ್ತು ಮತ್ತು ಪಾಯಿಂಟ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ತಮ್ಮ ಸ್ಥಳದಲ್ಲಿ ಏನಾದರೂ ಅಸಹಜವಾದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಸೂಚಿಸಲಾಗಿದೆ.