Publish Date: Sat, 23 Mar 2024 (14:01 IST)
Updated Date: Sat, 23 Mar 2024 (14:06 IST)
ನವದೆಹಲಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ಸೀಟು ಹಂಚಿಕೆ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿದೆ. ಅದರಂತೆ ಬಿಜೆಪಿ ಪ್ರತಿಷ್ಠಿತ ಮಂಡ್ಯ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ನಿರ್ಧರಿಸಿದೆ.
ಮಂಡ್ಯ ಅಭ್ಯರ್ಥಿ ಯಾರು ಎಂದು ಇದುವರೆಗೆ ಮೈತ್ರಿ ಪಕ್ಷಗಳು ಘೋಷಣೆ ಮಾಡಿಲ್ಲ. ಆದರೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಇದಕ್ಕಾಗಿ ದೆಹಲಿಯಲ್ಲಿ ರಾಷ್ಟ್ರಮಟ್ಟದ ನಾಯಕರನ್ನು ಭೇಟಿ ಮಾಡಿ ಲಾಬಿ ನಡೆಸಿದ್ದಾರೆ. ಆದರೆ ಇದು ಯಾವುದೂ ವರ್ಕೌಟ್ ಆಗುವಂತೆ ಕಾಣುತ್ತಿಲ್ಲ.
ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುತ್ತಿರುವುದಾಗಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಸುಮಲತಾಗೆ ಮಂಡ್ಯ ಟಿಕೆಟ್ ಸಿಗುವ ಕೊನೆಯ ಭರವಸೆಯೂ ನಂದಿ ಹೋಗಿದೆ.
ಹೀಗಾಗಿ ಅವರ ಮುಂದಿನ ನಡೆ ಏನಿರಬಹುದು ಎಂದು ಕುತೂಹಲ ಹೆಚ್ಚಾಗಿದೆ. ಸುಮಲತಾಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಫರ್ ನೀಡಲಾಗಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದಾರೆ. ನನಗೆ ಮಂಡ್ಯವೇ ಬೇಕು ಎಂದಿದ್ದಾರೆ. ಹೀಗಾಗಿ ಮತ್ತೆ ಪಕ್ಷೇತರರಾಗಿ ಮಂಡ್ಯದಿಂದ ಸ್ಪರ್ಧಿಸುತ್ತಾರಾ ಕಾದು ನೋಡಬೇಕಿದೆ.