Publish Date: Tue, 16 Aug 2022 (17:46 IST)
Updated Date: Tue, 16 Aug 2022 (17:50 IST)
ಬಿಜೆಪಿಯವರಿಗೆ ಕಾಮಾಲೆ ರೋಗ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ಹೊರಹಾಕಿದ್ದಾರೆ. ವೀರ ಸಾವರ್ಕರ್ ಭಾವಚಿತ್ರ ಇಡುವ ವಿಚಾರದಲ್ಲಿ ಶಿವಮೊಗ್ಗದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಬಗ್ಗೆ ಮಾತನಾಡಿದ ಅವರು, ಬಿಜೆಪಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವ ರೋಗ. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಿದ್ದಾರೆ. ಹಾಕಲಿ ಬೇಡ ಅನ್ನಲ್ಲ. ಆದರೆ ಟಿಪ್ಪು ಫೋಟೋ ತೆಗೆದಿದ್ದಾರೆ. ಹೀಗೆ ಮಾಡಿದರೆ ಗಲಭೆ ಆಗಲ್ವಾ? ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಾನೆ ಇರುತ್ತಾರೆ. ತಪ್ಪು ಅವರು ಮಾಡಿ ಕಾಂಗ್ರೆಸ್ ಮೇಲೆ ಹಾಕುತ್ತಾರೆ. ಮಗೂನು ಚಿವುಟುತ್ತಾರೆ, ತೊಟ್ಟಿಲು ಕೂಡ ತೂಗುತ್ತಾರೆ ಎಂದು ಕಿಡಿಕಾರಿದ್ದಾರೆ. ಘಟನೆಯಲ್ಲಿ ಎಸ್ಡಿಪಿಐ ಅವರಿದ್ದರೆ ಕ್ರಮ ತೆಗೆದುಕೊಳ್ಳಿ. ಸರ್ಕಾರ ನಿಮ್ಮದೆ ಇದೆ. ಎಸ್ಡಿಪಿಐ, ಪಿಎಫ್ಐ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂಬ ಬಗ್ಗೆ ನಿಮ್ಮ ಬಳಿ ದಾಖಲೆ ಇದ್ದರೆ ಕ್ರಮ ತೆಗೆದುಕೊಳ್ಳಿ. ಇಬ್ಬಂದಿ ರಾಜಕೀಯ ಮಾಡಬೇಡಿ. ಸಿಎಂ ಪ್ರವೀಣ್ ಮನೆಗೆ ಮಾತ್ರ ಹೋಗುತ್ತಾರೆ. ಇನ್ನಿಬ್ಬರ ಮನೆಗೆ ಯಾಕೆ ಹೋಗಲ್ಲ. ಸರ್ಕಾರದ ದುಡ್ಡು ಅಲ್ವಾ, ತೆರಿಗೆ ಹಣ ಅಲ್ವಾ. ಅವರಿಬ್ಬರಿಗೂ ಪರಿಹಾರ ಕೊಡಬೇಕಲ್ವಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.