Publish Date: Fri, 16 Feb 2024 (10:45 IST)
Updated Date: Fri, 16 Feb 2024 (10:52 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕರ್ನಾಟಕ ಬಜೆಟ್ 2024 ರನ್ನು ಮಂಡಿಸುತ್ತಿರುವಾಗಲೇ ವಿಪಕ್ಷ ಬಿಜೆಪಿ ತೀವ್ರ ಗದ್ದಲ ಏರ್ಪಡಿಸಿದೆ.
ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಂಚಿಕೆ ಸರಿಯಾಗಿ ಮಾಡಿಲ್ಲ. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ತಪ್ಪು ಲೆಕ್ಕಗಳು ಕಾರಣ. ದೇಶದಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿರುವುದರಿಂದ ಕೇಂದ್ರದ ತೆರಿಗೆ ಅನ್ಯಾಯದ ವಿರುದ್ಧ ಯಾರೂ ಧ್ವನಿಯೆತ್ತುತ್ತಿಲ್ಲ ಎಂದು ಬಜೆಟ್ ನಲ್ಲಿ ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಈ ಹೇಳಿಕೆಗಳನ್ನು ನೀಡುತ್ತಿದ್ದಂತೇ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಗದ್ದಲದ ಜೊತೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಆದರೆ ಈ ಪ್ರತಿಭಟನೆಯ ನಡುವೆಯೂ ಸಿಎಂ ಸಿದ್ದರಾಮಯ್ಯ ನಿಲ್ಲದೇ ಬಜೆಟ್ ಮಂಡನೆ ಮುಂದುವರಿಸಿದರು.
ಈ ನಡುವೆ ಗದ್ದಲ ನಡೆಸುತ್ತಿದ್ದ ವಿಪಕ್ಷ ಸದಸ್ಯರನ್ನು ಸುಮ್ಮನಾಗಿಸಲು ಸ್ಪೀಕರ್ ಖಾದರ್ ಯತ್ನಿಸಿದರು. ನಿಮಗೆ ಏನೇ ಹೇಳುವುದಿದ್ದರೂ ಆ ನಂತರ ಹೇಳಿ. ಈಗ ಸುಮ್ಮನಿರಿ ಎಂದು ಸ್ಪೀಕರ್ ಹೇಳಿದರೂ ಕೇಳದ ಬಿಜೆಪಿ ಸದಸ್ಯರು ಗದ್ದಲ ಮುಂದುವರಿಸಿದರು.