Publish Date: Sat, 18 Jun 2022 (17:04 IST)
Updated Date: Sat, 18 Jun 2022 (17:07 IST)
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಸರಣಿ ಸೋಲಾದ ಹಿನ್ನೆಲೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ವಿರುದ್ದ ಹೈಕಮಾಂಡ್ ಗೆ ದೂರು ನೀಡಲಾಗಿದೆ.
ದಕ್ಷಿಣ ಪದವೀಧರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರು ಬಿ.ಎಲ್.ಸಂತೋಷ್ ಮೂಲಕ ಹೈಕಮಾಂಡ್ ಗೆ ಸೋಲಿಗೆ ಕಾರಣ ಹೇಳಿದ್ದಾರೆ ಎನ್ನಲಾಗಿದೆ.
ಬಿಜೆಪಿ ಭದ್ರಕೋಟೆಯಾಗಿದ್ದ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಹಿನ್ನಡೆಯಾಗಲು ಸ್ವಪಕ್ಷೀಯರೇ ಕಾರಣ. ಒಕ್ಕಲಿಗ ಮತಗಳನ್ನ ಸೆಳೆಯುವಲ್ಲಿ ಬಿಜೆಪಿ ವಿಫಲವಾಗಿದೆ. ವಕೀಲರ ಬಗ್ಗೆ ಅವಹೇಳನದ ಮಾತು, ಚುನಾವಣಾ ಹೊಸ್ತಿಲಲ್ಲಿ ಶಾಸಕ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ವಿರುದ್ದ ಹೇಳಿಕೆ ಸೇರಿದಂತೆ ಹಲವು ಎಡವಟ್ಟುಗಳಿಂದ ಮೈಸೂರು ನಗರದಲ್ಲಿ ಬಿಜೆಪಿ ಪರವಾದ ಅತ್ಯಧಿಕ ಮತಗಳಿದ್ದರೂ ಸೆಳೆಯುವಲ್ಲಿ ವಿಫಲವಾಗಿದೆ ಎಂದು ಮೈ.ವಿ.ರವಿಶಂಕರ್ ತಿಳಿಸಿದ್ದಾರೆ.
ಎಸ್.ಟಿ.ಸೋಮಶೇಖರ್, ಪ್ರತಾಪ್ಸಿಂಹ ಕೇವಲ ವೇದಿಕೆ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿದ್ದರು. ರಘು ಕೌಟಿಲ್ಯಗೆ ನೀಡಿದ ಒಳ ಏಟಿನಂತೆ ನನಗೂ ಒಳ ಏಟು ನೀಡಲಾಗಿದ್ದು ಈ ಹಿನ್ನೆಲೆಯಲ್ಲಿ ಸೋಲಾಗಿದೆ. ಇವರಿಬ್ಬರ ವಿರುದ್ದ ಕ್ರಮ ಜರುಗಿಸಬೇಕು ಎಂದು ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಮೈ.ವಿ.ರವಿಶಂಕರ್ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ಸಿಂಹ ವಿರುದ್ದ ಕ್ರಮ ಕೈಗೊಳ್ಳುವ ಕುರಿತಂತೆ ಸಂತೋಷ್ ಚರ್ಚೆ ನಡೆಸಿದ್ದಾರೆ. ಎನ್ನಲಾಗಿದೆ.