Publish Date: Sun, 06 Oct 2024 (09:58 IST)
Updated Date: Sun, 06 Oct 2024 (10:01 IST)
ಬೆಂಗಳೂರು: 50 ಕೋಟಿ ರೂ. ಹಣಕ್ಕಾಗಿ ಬೇಡಿಕೆ ಮತ್ತು ಬೆದರಿಕೆ ಹಾಕಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಪ್ರಕರಣ ಸಂಬಂಧ ಉದ್ಯಮಿ ವಿಜಯ್ ತಾತಾ ಎಂಬವರು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. ಅವರ ಚುನಾವಣೆ ಖರ್ಚಿಗೆ 50 ಕೋಟಿ ರೂ. ಹಣಕ್ಕಾಗಿ ಕುಮಾರಸ್ವಾಮಿ ಡಿಮ್ಯಾಂಡ್ ಮಾಡಿದ್ದರು ಎಂದು ವಿಜಯ್ ತಾತಾ ದೂರು ನೀಡಿದ್ದರು.
ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಕುಮಾರಸ್ವಾಮಿ ಜೊತೆಗೆ ಅವರ ಆಪ್ತ ರಮೇಶ್ ಬಾಬು ಕೂಡಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ತನಗೆ ಕರೆ, ವ್ಯಾಟ್ಸಪ್ ಸಂದೇಶ ಕಳುಹಿಸಿ ಬೆದರಿಸಿದ್ದರು ಎಂದು ಆರೋಪಿಸಿದ್ದರು.
ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ವಿಜಯ್ ತಾತಾ ಪ್ರಾಥಮಿಕ ದಾಖಲೆಗಳನ್ನು ಒದಗಿಸಿಲ್ಲ. ದೂರಿಗೆ ಸಂಬಂಧಪಟ್ಟ ದಾಖಲೆ ನೀಡದ ಕಾರಣ ಪ್ರಕರಣ ಹಳ್ಳ ಹಿಡಿಯುವ ಲಕ್ಷಣ ಕಾಣುತ್ತಿದೆ. ಪ್ರಾಥಮಿಕ ದಾಖಲಾತಿ ನೀಡಿದ ಬಳಿಕ ಪ್ರಕರಣ ಮುಂದುವರಿಯಲಿದೆ. ಆದರೆ ಸದ್ಯಕ್ಕೆ ಕುಮಾರಸ್ವಾಮಿಗೆ ರಿಲೀಫ್ ಸಿಕ್ಕಿದೆ.