Publish Date: Mon, 21 Apr 2025 (08:53 IST)
Updated Date: Mon, 21 Apr 2025 (08:58 IST)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಿಗೆ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದು, ಇದರ ಹಿಂದೆ ಭಾರೀ ಲೆಕ್ಕಾಚಾರವಿದೆ. ಡಿಕೆಶಿ ಇತ್ತೀಚೆಗಿನ ಹಿಂದುತ್ವ ನಿಲುವು ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.
ಡಿಕೆ ಶಿವಕುಮಾರ್ ಕುಂಭಮೇಳ ಮಹಾಸ್ನಾನದಿಂದ ಹಿಡಿದು ನಿನ್ನೆಯ ಧರ್ಮಸ್ಥಳ ಭೇಟಿವರೆಗೆ ಇತ್ತೀಚೆಗೆ ತಾನು ಅಪ್ಪಟ ಹಿಂದೂ, ಧರ್ಮ, ದೇವರ ಮೇಲೆ ನನಗೆ ಅಪಾರ ಶ್ರದ್ಧೆಯಿದೆ ಎಂದು ತೋರಿಸಿಕೊಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.
ವಿಶೇಷವಾಗಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಹಿಂದೂಗಳ ಬೆಂಬಲವಿಲ್ಲದೇ ಗೆಲ್ಲುವುದು ಸಾಧ್ಯವಿಲ್ಲ. ಈ ಕಡೆ ದೈವ-ದೇವರ ಬಗ್ಗೆ ಅಪಾರ ಶ್ರದ್ಧಾ-ಭಕ್ತಿಯಿದೆ. ಹೀಗಾಗಿಯೇ ಇಷ್ಟು ದಿನವೂ ಇಲ್ಲಿ ಬಿಜೆಪಿ ಗಟ್ಟಿಯಾಗಿ ನೆಲಯೂರಿದೆ. ಈಗ ಡಿಕೆಶಿ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಸಾಫ್ಟ್ ಹಿಂದುತ್ವದ ಸಂದೇಶ ಸಾರುತ್ತಿದ್ದು, ಇಲ್ಲಿನ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಇದು ಬಿಜೆಪಿಗೆ ಒಳಗೊಳಗೇ ಆತಂಕ ತರುವುದು ಖಂಡಿತಾ.
ಅಷ್ಟಕ್ಕೂ ಕರಾವಳಿ ಭಾಗದವರ ಮನಸ್ಸು ಗೆಲ್ಲುವುದು ಅಷ್ಟು ಸುಲಭವಲ್ಲ. ಇಲ್ಲಿನ ಜನರ ನಂಬಿಕೆ ಗಳಿಸಬೇಕೆಂದರೆ ಯಾವುದು ಉತ್ತಮ ದಾರಿ ಎಂಬುದನ್ನು ಡಿಕೆಶಿ ಅರಿತುಕೊಂಡಂತಿದೆ. ಹೀಗಾಗಿಯೇ ಅವರ ಟೆಂಪಲ್ ರನ್ ಪ್ರಾಮುಖ್ಯತೆ ಪಡೆಯುತ್ತಿದೆ.