Publish Date: Sat, 26 Nov 2022 (15:37 IST)
Updated Date: Sat, 26 Nov 2022 (15:39 IST)
ಚಲಿಸುತ್ತಿದ್ದ ರೈಲಿಗೆ ಕೂಲಿ ಕಾರ್ಮಿಕನೋರ್ವ ಕಾಲು ಕೊಟ್ಟಿರುವ ಘಟನೆ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ನಡೆದಿದೆ. ಸವಳಂಗ ರಸ್ತೆಯಲ್ಲಿ ರೈಲ್ವೆ ಫ್ಲೈಓವರ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಕೆಲಸಕ್ಕೆಂದು ಬಿಹಾರ ಮೂಲದ ಕಾರ್ಮಿಕ ಆದಿಲ್ ಬಂದಿದ್ದನು. ಕುಡಿದ ಮತ್ತಿನಲ್ಲಿದ್ದ ಆದಿಲ್ ಜರ್ದಾ ತಂಬಾಕು ಅಗಿಯುತ್ತಾ, ರೈಲ್ವೆ ಹಳಿಯ ಮೇಲೆ ಕುಳಿತುಕೊಂಡಿದ್ದನು. ಈ ವೇಳೆ ರೈಲು ಬರುತ್ತಿದ್ದರೂ, ಮದ್ಯದ ನಶೆಯಲ್ಲಿ ತೇಲುತ್ತಿದ್ದ ಯುವಕ ಎಲ್ಲೂ ಜಗ್ಗದೇ ಹಳಿ ಮೇಲೆ ಕುಳಿತಿದ್ದ, ಇದರಿಂದ ರೈಲು ಆತನ ಕಾಲಿನ ಮೇಲೆ ಚಲಿಸಿದೆ. ಪರಿಣಾಮ ಆದಿಲ್ ಕಾಲು ತುಂಡಾಗಿದೆ. ಕಾಲು ತುಂಡಾದರೂ ಸಹ ಮೈ ಮೇಲೆ ಪ್ರಜ್ಞೆ ಇಲ್ಲದೇ ಆದಿಲ್ ಕುಳಿತಿದ್ದನು. ಹೀಗಿದ್ದರೂ ಆತನ ಕಡೆಯವರು ರಕ್ಷಿಸಲು ಬರಲಿಲ್ಲ. ನಂತರ ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಗಾಯಾಳು ಯುವಕನನ್ನು ತುಂಡಾದ ಕಾಲಿನ ಜೊತೆಗೆ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.