ಬೆಂಗಳೂರು: 79 ನೇ ಸ್ವಾತಂತ್ರ್ಯೋತ್ಸವ ದಿನದಂದೇ ಬೆಂಗಳೂರಿನಲ್ಲಿ ಇಂದು ಮನೆಯೊಂದರಲ್ಲಿ ಅನುಮಾನಸ್ಪದ ಸ್ಪೋಟವಾಗಿದ್ದು, ಓರ್ವ ಬಾಲಕ ಸಾವನ್ನಪ್ಪಿ ಹಲವರಿಗೆ ಗಾಯಗಳಾಗಿವೆ.
ವಿಲ್ಸನ್ ಗಾರ್ಡನ್ ಬಳಿ ಚಿನ್ನಯ್ಯನ ಪಾಳ್ಯದ ಮನೆಯೊಂದರಲ್ಲಿ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಪಕ್ಕದ ಮನೆಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ಓರ್ವ ಬಾಲಕ ಸಾವನ್ನಪ್ಪಿರುವುದು ಖಚಿತವಾಗಿದೆ. ಉಳಿದ ಕೆಲವರಿಗೆ ಗಾಯಗಳಾಗಿವೆ. ಸ್ಪೋಟಕ್ಕೆ ಕಾರಣವೇನೆಂದು ತನಿಖೆ ನಡೆಯುತ್ತಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸಿಲಿಂಡರ್ ಸ್ಪೋಟವೆನ್ನಲಾಗುತ್ತಿದೆ. ಆದರೆ ಇದರ ಹಿಂದೆ ಬೇರೆಯೇ ಸಾಧ್ಯತೆಗಳಿರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಒಟ್ಟು 12 ಮಂದಿ ಗಾಯಗೊಂಡಿದ್ದು ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸಂಜಯಗಾಂಧಿ ಆಸ್ಪತ್ರೆ ಮತ್ತು ಜಯನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.