Publish Date: Fri, 01 Apr 2022 (14:54 IST)
Updated Date: Fri, 01 Apr 2022 (14:57 IST)
ಜನ ಸಾಮಾನ್ಯರು ಏಪ್ರಿಲ್ 1ನೇ ತಾರೀಖನ್ನು ಮೂರ್ಖರ ದಿನ ಎಂದು ಆಚರಿಸೋದು ಸರ್ವೇ ಸಾಮಾನ್ಯ. ಆದರೆ, ಬಿಬಿಎಂಪಿ ಅಧಿಕಾರಿಗಳು ಮತ್ತು ಜನಪ್ರತಿನಿಗಳು ಸೇರಿಕೊಂಡು ಒಂದು ದಿನ ಮೊದಲೇ ಇಡಿ ನಗರದ ಜನರನ್ನು ಮೂರ್ಖರನ್ನಾಗಿಸಿದ್ದಾರೆ.
ಕಳ್ಳರಂತೆ ಕದ್ದು ಮುಚ್ಚಿ ರಾತ್ರೋರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ ಮಾಡಿರುವುದಲ್ಲದೆ ಕಾನೂನಿಗೆ ವಿರೋಧವಾಗಿ ತಮ್ಮ ಮನಸ್ಸಿಗೆ ಬಂದಂತೆ ಬಜೆಟ್ ಮಂಡನೆ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
1949ರಲ್ಲಿ ಮೇಯರ್ಗಿರಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಪಾಲಿಕೆ ಕಟ್ಟಡ ಹೊರತುಪಡಿಸಿ ಬೇರೆ ಕಡೆ ಬಜೆಟ್ ಮಂಡನೆ ಮಾಡಿರುವ ಇತಿಹಾಸವಿಲ್ಲ. ಅದರಲ್ಲೂ ಬಜೆಟ್ ಮಂಡನೆ ಮಾಡಬೇಕಾದರೆ, ಮೇಯರ್, ಉಪಮೇಯರ್ಗಳು, ಆಯುಕ್ತರ ಹಾಜರಾತಿಯಲ್ಲೇ ಬಜೆಟ್ ಮಂಡನೆ ಮಾಡಬೇಕು. ಒಂದು ವೇಳೆ ಜನಪ್ರತಿನಿಧಿಗಳು ಇಲ್ಲದಿದ್ದರೆ ಅಡಳಿತಾಧಿಕಾರಿಗಳ ಸಮ್ಮುಖದಲ್ಲಿ ಬಜೆಟ್ ಮಂಡನೆ ಮಾಡುವುದು ವಾಡಿಕೆ.
ಆದರೆ, ಈ ಬಾರಿ ಬಿಬಿಎಂಪಿ ಕಟ್ಟಡಕ್ಕೆ ಬದಲಾಗಿ ರಾತ್ರೋರಾತ್ರಿ ನಗರಾಭಿವೃದ್ಧಿ ಇಲಾಖೆಯ ರೂಮ್ ನಂಬರ್ 436ರಲ್ಲಿ ಬಜೆಟ್ ಮಂಡನೆ ಮಾಡಿ ತಕ್ಷಣ ಅನುಮೋದನೆ ಪಡೆದುಕೊಂಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅದರಲ್ಲೂ ಬಿಬಿಎಂಪಿ ಮುಖ್ಯ ಅಯುಕ್ತರ ಅನುಪಸ್ಥಿತಿಯಲ್ಲಿ ಬಜೆಟ್ ಮಂಡನೆ ಮಾಡಿ ಅಪ್ರೂವಲ್ ಪಡೆದುಕೊಂಡಿರುವುದರ ಹಿಂದೆ ನಗರದ ಪ್ರಭಾವಿ ಸಚಿವರುಗಳ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿವೆ.