Select Your Language

Notifications

webdunia
webdunia
webdunia
webdunia

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಬಿ ವೈ ವಿಜಯೇಂದ್ರ

B Y Vijayendra

Krishnaveni K

ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2024 (13:07 IST)
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಪದೇಪದೇ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಪೊಲೀಸ್ ಅಧಿಕಾರಿಗಳು ಇದೇರೀತಿ ದೌಲತ್ತಿನಿಂದ ನಡೆದುಕೊಂಡರೆ ನನ್ನನ್ನೂ ಸೇರಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಕೆ ನೀಡಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪೊಲೀಸರು ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ವಿನಾಕಾರಣ ಎಫ್‍ಐಆರ್ ದಾಖಲಿಸುತ್ತಿದ್ದಾರೆ. ಆಡಳಿತ ಪಕ್ಷಕ್ಕೆ ಖುಷಿಪಡಿಸಲು ಅಧಿಕಾರಿಗಳ ಈ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.

ತಪ್ಪು ಮಾಡಿದ ಅಧಿಕಾರಿಗಳಿಗೆ ತಿಳಿಹೇಳುವ ಕೆಲಸವನ್ನು ಮಾಡಿ ಎಂದು ಗೃಹ ಸಚಿವರಿಗೆ ಒತ್ತಾಯಿಸಿದರು. ನಿನ್ನೆ ನಡೆದ ಘಟನೆ ಸಣ್ಣ ಘಟನೆಯಲ್ಲ; ವಿನಾಕಾರಣ ನಮ್ಮ ಕಾರ್ಯಕರ್ತೆಯನ್ನು ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ವರೆಗೆ ಕೂರಿಸಿದ್ದು ಅಕ್ಷಮ್ಯ ಅಪರಾಧ. ಜನರಿಗೆ ನ್ಯಾಯ ಕೊಡಬೇಕಾದ ಪೊಲೀಸರು ಹೀಗೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಿನ್ನೆ ನಮ್ಮ ಬಿಜೆಪಿಯ ಕಾರ್ಯಕರ್ತೆ ಛಾಯಾ ಅವರು ಸದಸ್ಯತ್ವ ಅಭಿಯಾನ ಮಾಡುವ ಸಂದರ್ಭದಲ್ಲಿ ರಾತ್ರಿ ಏಕಾಏಕಿ ಪೊಲೀಸರು ಆ ಹೆಣ್ಮಗಳನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದಾರೆ. ಎಫ್‍ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ. ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಪೊಲೀಸ್ ಠಾಣೆಗೆ ಧಾವಿಸಿ ಹೋಗಿ ಕಾರಣ ಕೇಳಿದ್ದಾರೆ. ಆಗ ಒಟಿಪಿಗಳನ್ನು ಡೌನ್‍ಲೋಡ್ ಮಾಡುತ್ತಿದ್ದಾರೆಂದು ಏನೇನೋ ಕಥೆ ಹೇಳಿಕೊಂಡು ಆ ಹೆಣ್ಮಗಳನ್ನು ರಾತ್ರಿ 12ರವರೆಗೆ ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಂಡು ದಬ್ಬಾಳಿಕೆ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
 
ಮುಖ್ಯಮಂತ್ರಿಗಳು ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು
ಮುಖ್ಯಮಂತ್ರಿಗಳು ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ರಾಜ್ಯದ ಜನರ ಅಭಿಪ್ರಾಯಕ್ಕೆ ನೀವು ಮನ್ನಣೆ ನೀಡಬೇಕು. ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ತಮ್ಮ ಕುಟುಂಬಕ್ಕೆ ನೀಡಿದ್ದು, ಇದರಲ್ಲಿ ಅಕ್ರಮ ನಡೆದಿದೆ. ಹಾಗಾಗಿ ತಮ್ಮ ಭಂಡತನ ಬದಿಗಿಟ್ಟು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮೈಸೂರಿನ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೇ ಇಷ್ಟು ದೊಡ್ಡ ಭ್ರಷ್ಟಾಚಾರ ಆಗಲು ಸಾಧ್ಯ ಇರಲಿಲ್ಲ. ಕಾನೂನಿನ ಪ್ರಕಾರ ಕೇವಲ 4600 ಚದರಡಿ ನಿವೇಶನ ಸಿಗಬೇಕಿತ್ತು. ಇವರಿಗೆ 56 ಕೋಟಿ ಬೆಲೆಬಾಳುವ 14 ನಿವೇಶನಗಳು ಸಿಕ್ಕಿರುವುದು ಕಾನೂನುಬಾಹಿರವಾಗಿದೆ. ಇವೆಲ್ಲವುಗಳ ಸಮಗ್ರ ತನಿಖೆ ಆಗಬೇಕಿದೆ ಎಂಬ ವಿಚಾರವನ್ನು ಹೈಕೋರ್ಟ್ ತಿಳಿಸಿದೆ ಎಂದು ವಿಶ್ಲೇಷಿಸಿದರು.

ಹೈಕೋರ್ಟ್ ತೀರ್ಪಿನ ನಂತರ ಸಿಎಂ ಹೇಳಿಕೆಯನ್ನು ಗಮನಿಸಿದ್ದೇನೆ. ಮುಖ್ಯಮಂತ್ರಿಗಳು ತಮ್ಮ ಭಂಡತನದಿಂದ ಇನ್ನೂ ಹೊರಕ್ಕೆ ಬರುತ್ತಿಲ್ಲ. ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. ರಾಜಭವನ ದುರುಪಯೋಗ ಆಗುತ್ತಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ. ಮತ್ತೊಂದು ಕಡೆ ತಾನೇನೂ ತಪ್ಪು ಮಾಡಿಲ್ಲ; ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವವಿಸುವುದಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಆಕ್ಷೇಪಿಸಿದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ಮಾನ್ಯ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ್ದಾರೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳೇ ನಿನ್ನೆ ಹೈಕೋರ್ಟ್ ತೀರ್ಪು ಸ್ಪಷ್ಟವಾಗಿ ಹೇಳಿದೆ. ಯಾವ ರೀತಿ ಭ್ರಷ್ಟಾಚಾರ ಆಗಿದೆ; ಯಾವ ರೀತಿ ಅಧಿಕಾರ ದುರುಪಯೋಗ ಆಗಿದೆ, ಮೇಲ್ನೋಟಕ್ಕೆ ಇದರ ತನಿಖೆ ಆಗಬೇಕಿದೆ ಎಂದು ಹೈಕೋರ್ಟ್ ಹೇಳಿದರೂ, ಇವೆಲ್ಲವನ್ನೂ ರಾಜಕೀಯಪ್ರೇರಿತ ಎಂದು ಬಿಂಬಿಸುವ ಕೆಲಸವನ್ನು ತಾವು ಮಾಡಿದ್ದೀರಿ ಎಂದು ಟೀಕಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಭಾರತೀಯ ಪೌರರೇ ಅಲ್ಲ, ಅವರಿಗಿರೋದು ಬ್ರಿಟಿಷ್ ಪೌರತ್ವ: ಇಂದು ವಿಚಾರಣೆ ಶುರು