Publish Date: Fri, 11 Nov 2022 (17:24 IST)
Updated Date: Fri, 11 Nov 2022 (17:29 IST)
ಬಿರಿಯಾನಿ ಕೊಡಲು ರೆಸ್ಟೋರೆಂಟ್ ಸಿಬ್ಬಂದಿ ತಡ ಮಾಡಿದ್ದಕ್ಕೆ ಸಿಟ್ಟಿಗೆದ್ದು ಮೂವರು ವ್ಯಕ್ತಿಗಳು ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ಅನ್ಸಲ್ ಪ್ಲಾಜಾ ಮಾಲ್ನಲ್ಲಿರುವ ರೆಸ್ಟೋರೆಂಟ್ನಲ್ಲಿ ಬುಧವಾರ ರಾತ್ರಿ 10: 30 ರ ಸುಮಾರಿಗೆ ಈ ಘಟನೆ ನಡೆದಿದೆ. ಹಲ್ಲೆ ನಡೆಸಿದ್ದವರನ್ನು ಬಂಧಿಸಲಾಗಿದೆ. ಬಂಧಿತರನ್ನು ಮನೋಜ್, ರರವೇಶ್ ಮತ್ತು ಕ್ರಿಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಾದ್ರಿ ನಿವಾಸಿಗಳು. ಸಿಬ್ಬಂದಿಗೆ ಥಳಿಸುತ್ತಿರುವ ದೃಶ್ಯವು ರೆಸ್ಟೋರೆಂಟ್ CCTVಯಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ರೆಸ್ಟೋರೆಂಟ್ನ ಟೇಬಲ್ನಲ್ಲಿ ಮೂವರು ಯುವಕರು ಕುಳಿತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ಹೊತ್ತಿನವರೆಗೆ ಕುಳಿತಿದ್ದ ಅವರಲ್ಲಿ ಓರ್ವ ಇದ್ದಕ್ಕಿದ್ದಂತೆ ಎದ್ದು, ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ನಂತರ ಆತನ ಕುತ್ತಿಗೆಯನ್ನು ಹಿಡಿದು ಎಳೆದುಕೊಂಡು ಬಂದು ಚೆನ್ನಾಗಿ ಥಳಿಸಿದ್ದಾನೆ. ಇಷ್ಟು ಮಾತ್ರವಲ್ಲದೆ ಸಿಬ್ಬಂದಿಯನ್ನು ರೆಸ್ಟೋರೆಂಟ್ನಿಂದ ಹೊರಗೆಳೆದುಕೊಂಡು ಬಂದು ಮೂವರು ಒದ್ದು, ಥಳಿಸಿದ್ದಾರೆ. ಈ ಸಂಬಂಧ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 323 ಮತ್ತು 147ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.