Publish Date: Sat, 09 May 2020 (16:42 IST)
Updated Date: Sat, 09 May 2020 (16:44 IST)
ನಿಮ್ಮ ಕುಟುಂಬದವರು ಹಾಗೂ ನೆರೆ ಹೊರೆಯವರು ಬೇರೆ ರಾಜ್ಯಗಳಲ್ಲಿ ಇದ್ದರೆ ಈ ಸುದ್ದಿಯನ್ನು ಮಿಸ್ ಮಾಡದೇ ಓದಿ.
ಲಾಕ್ ಡೌನ್ ನಂತರ ಅಂತರ್ ರಾಜ್ಯಗಳಿಂದ ಬಳ್ಳಾರಿ ಜಿಲ್ಲೆಗೆ ಬರುವ ವಲಸೆ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಹಾಗೂ ಇತರೇ ಸಾರ್ವಜನಿಕರಿಗೆ ಜಿಲ್ಲೆಯ ಮೂಲಕ ಪ್ರವೇಶಿಸುವುದಕ್ಕೆ ಬಳ್ಳಾರಿ ತಾಲೂಕಿನ ಜೋಳದರಾಶಿ ಬಳಿ ವಿಶೇಷ ಚೆಕ್ಪೋಸ್ಟ್ನ್ನು ಜಿಲ್ಲಾಡಳಿತ ಆರಂಭಿಸಿದೆ.
ಇಲ್ಲಿನ ವಲಸಿಗರಿಗೆ ತಪಾಸಣೆ ನಡೆಸಿ ಅವರ ಸಂಬಂಧಿಸಿದ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತಿದೆ ಮತ್ತು ಬಳ್ಳಾರಿ ಜಿಲ್ಲೆಯವರಾಗಿದ್ದರೇ ಅವರನ್ನು 14 ದಿನ ಕ್ವಾರಂಟೈನ್ಗೆ ಕಳುಹಿಸಿಕೊಡಲಾಗುತ್ತಿದೆ.
ಅನ್ಯ ಜಿಲ್ಲೆಗಳಿಗೆ ತೆರಳಬೇಕಾದವರಿದ್ದಲ್ಲಿ ಸಂಬಂಧಿಸಿದ ಜಿಲ್ಲಾ ನೋಡಲ್ ಅಧಿಕಾರಿಗಳ ಎಸ್ಕಾರ್ಟ್ ವಾಹನದ ಮೂಲಕ ವಲಸಿಗರ ವಾಹನವನ್ನು ಕರೆದುಕೊಂಡು ಸಂಬಂಧಿಸಿದ ಜಿಲ್ಲೆಯ ಗಡಿಯ ಚೆಕ್ಪೋಸ್ಟ್ ಬಳಿ ಬಿಟ್ಟು ಬರಲಾಗುತ್ತಿದೆ.
ಕಳೆದ 24 ಗಂಟೆಗಳಿಂದ ಗುಂಟೂರು, ಚಿತ್ತೂರು, ಅನಂತಪುರ ಜಿಲ್ಲೆಗಳಿಂದ 150 ಕ್ಕೂ ಹೆಚ್ಚು ಜನರು ಈ ಚೆಕ್ಪೋಸ್ಟ್ ಮೂಲಕ ಆಗಮಿಸಿದ್ದು, ಅವರನ್ನು ತಪಾಸಣೆ ಮಾಡಿ ಕ್ವಾರಂಟೈನ್ಗೆ ಕಳುಹಿಸಲಾಗಿದೆ.
ದಿನ 24 ತಾಸು 50 ಕ್ಕೂ ಹೆಚ್ಚು ಜನ ಸಿಬ್ಬಂದಿ ಮೂರು ಪಾಳಯದಲ್ಲಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸುವ ವಲಸಿಗರನ್ನು ತಪಾಸಣೆ ಮಾಡುತ್ತಿದ್ದು,ಉಳಿದ ಇಲಾಖೆಗಳ ಸಿಬ್ಬಂದಿ ವಲಸಿಗರು ಯಾವ ಜಿಲ್ಲೆಯವರು; ಎಲ್ಲಿಗೆ ತಲುಪಬೇಕು ಎಂಬುದನ್ನು ನಮೂದಿಸಿಕೊಂಡು ಅಲ್ಲಿಗೆ ಕಳುಹಿಸಿಕೊಡುವ ಕೆಲಸ ಮಾಡುತ್ತಿದ್ದಾರೆ.