Publish Date: Fri, 16 Jun 2023 (09:16 IST)
Updated Date: Fri, 16 Jun 2023 (10:17 IST)
ಬೆಂಗಳೂರು : ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಓಡಾಡಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹೌದು.. ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಜೂನ್ 26ರಂದು ಒಟ್ಟು 5 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಇದೇ ವೇಳೆ ಬೆಂಗಳೂರು- ಹುಬ್ಬಳ್ಳಿವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ ಕರ್ನಾಟಕದಲ್ಲಿ ವಂದೇ ಭಾರತ್ ರೈಲಿನ ಸಂಖ್ಯೆ 2ಕ್ಕೆ ಏರಲಿದೆ. ಈ ಮೊದಲು ಮೈಸೂರು-ಚೆನ್ನೈ ವಂದೇ ಭಾರತ್ ಆರಂಭಿಸಲಾಗಿತ್ತು.
ಬೆಂಗಳೂರು- ಹುಬ್ಬಳ್ಳಿ, ಮುಂಬೈ- ಗೋವಾ, ಪಟನಾ- ರಾಂಚಿ, ಭೋಪಾಲ್- ಇಂದೋರ್ ಮತ್ತು ಭೋಪಾಲ್- ಜಬ್ಬಲ್ಪುರ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗುತ್ತದೆ. ಇದೇ ಮೊದಲ ಬಾರಿಗೆ ಒಂದೇ ದಿನ 5 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ.
288 ಜನರ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತದ ಬಳಿಕ ಮೊದಲ ಬಾರಿಗೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗುತ್ತಿದ್ದು, ದುರಂತದ ಬಳಿಕ ಮುಂಬೈ ಮತ್ತು ಗೋವಾ ನಡುವಿನ ರೈಲು ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಈಗ ಜೂನ್ 26ರಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಒಟ್ಟು 5 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ದೇಶದಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆ 24ಕ್ಕೆ ಏರಿಕೆಯಾಗಲಿದೆ.
Ramya kosira
Publish Date: Fri, 16 Jun 2023 (09:16 IST)
Updated Date: Fri, 16 Jun 2023 (10:17 IST)