Publish Date: Mon, 27 Oct 2025 (16:26 IST)
Updated Date: Mon, 27 Oct 2025 (16:29 IST)
ಹೂವಿನಹಡಗಲಿ (ವಿಜಯನಗರ): ಇಲ್ಲಿನ ದಾಕ್ಷಾಯಣಿ ಲಾಡ್ಜ್ನಲ್ಲಿ ಹುಬ್ಬಳ್ಳಿಯ ಉದ್ಯಮಿ ಹಾಗೂ ಸಿವಿಲ್ ಗುತ್ತಿಗೆದಾರ ಆನಂದ ಉಮೇಶ್ ಹೆಗಡೆ (40) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾರೆ.
ಆತ್ಮಹತ್ಯೆಗೆ ಶರಣಾದ ಉಮೇಶ್ ಹೆಗಡೆಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಯನ್ನು ಅವರು ಟೆಂಡರ್ ಪಡೆದು ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದರು.
ಹುಬ್ಬಳ್ಳಿಯಿಂದ ಭಾನುವಾರ ಬೆಳಿಗ್ಗೆ ಪಟ್ಟಣಕ್ಕೆ ಬಂದಿದ್ದ ಆನಂದ, ದಾಕ್ಷಾಯಣಿ ಲಾಡ್ಜ್ನಲ್ಲಿ ಕೊಠಡಿ ಪಡೆದು ತಂಗಿದ್ದರು.
ಇಂದು ಬೆಳಿಗ್ಗೆ ಕುಟುಂಬದವರು ಅನೇಕ ಬಾರಿ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಕೊಠಡಿಯ ಬಾಗಿಲು ತಟ್ಟಿದರೂ ತೆರೆಯದೇ ಇದ್ದಾಗ ಲಾಡ್ಜ್ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರೂಂ ತೆರೆಸಿದಾಗ ಕಿಟಕಿಯ ಸರಳಿಗೆ ಬಟ್ಟೆಯಿಂದ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ.
ಪೊಲೀಸರ ಪ್ರಕಾರ, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಟುಂಬದವರು ಆಗಮಿಸಿ ದೂರು ನೀಡಿ, ತನಿಖೆ ನಡೆಸಿದ ಬಳಿಕ ಕಾರಣ ತಿಳಿದುಬರಲಿದೆ ಎಂದಿದ್ದಾರೆ.