Publish Date: Fri, 24 Feb 2023 (15:16 IST)
Updated Date: Fri, 24 Feb 2023 (15:20 IST)
ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆಗೈದ ಹಂತಕರು ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ನಾಲೆಗೆ ಎಸೆದಿರುವ ಭಯಾನಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕ್ರೂರಿ ಕೊಲೆ ಪಾತಕರು ವ್ಯಕ್ತಿಯ ಕೈ, ಕಾಲು, ದೇಹ, ರುಂಡ-ಮುಂಡಗಳನ್ನು ಬಿಡಿ ಬಿಡಿಯಾಗಿ ತುಂಡರಿಸಿದ್ದು ಅವುಗಳನ್ನು ನಾಲೆಗೆ ಎಸೆದಿದ್ದಾರೆ. ಮಂಡ್ಯ ತಾಲೂಕಿನ ಹೊಡಾಘಟ್ಟ , ಶಿವಾರ, ಡಣಾಯಕನಪುರ ಹಾಗೂ ಮದ್ದೂರು ತಾಲೂಕಿನ ಗೂಳೂರಿನಲ್ಲಿ ವ್ಯ ಕ್ತಿಯ ದೇಹದ ಅಂಗಾಂಗಳು ದೊರೆತಿವೆ. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಸಿ.ನಾಲೆಯಲ್ಲಿ ಈ ದೇಹದ ತುಂಡುಗಳು ಪತ್ತೆಯಾಗಿವೆ. ದೇಹದ ಅಂಗಾಂಗಗಳ ಆಧಾರ ಹಿನ್ನೆ ಲೆಯಲ್ಲಿ 30 ರಿಂದ 40 ವರ್ಷದ ಆಸುಪಾಸಿನ ಪುರುಷ ವ್ಯಕ್ತಿ ಇರಬಹುದೆಂದು ಪೊಲೀಸರು ಅಂದಾಜು ಮಾಡಿದ್ದಾರೆ. ದೇಹದ ಅಂಗಾಂಗಳು ಬೇರೆ ಪ್ರದೇಶಗಳಲ್ಲಿ ದೊರೆತಿವೆ. ಮೃತ ವ್ಯಕ್ತಿಯ ಎಡಗೈ ಮೇಲೆ ಕಾವ್ಯ , ರಘು ಎಂದು ಹಚ್ಚೆ ಕಂಡು ಬಂದಿದ್ದು ಬಲಗೈಯಲ್ಲಿ ವನಜಾ ಎಂದು ಹಚ್ಚೆ ಗುರುತು ಇದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಕೆ.ಎಂ ದೊಡ್ಡಿಯ ಕೆರಗೂಡು ಪೊಲೀಸರು ಮೃತದೇಹ ಸಂಗ್ರಹಿಸಿ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.