ಬೆಂಗಳೂರು: ರಾಜ್ಯದಲ್ಲಿ ಸೇವ್ ನಂದಿನಿ ಎಂದು ಅಭಿಯಾನ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ನಂದಿನಿ ಬಿಟ್ಟು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಗುಜರಾತ್ ನ ಅಮೂಲ್ ಗೆ ಅವಕಾಶ ಮಾಡಿಕೊಟ್ಟಿತಾ? ಹೀಗೊಂದು ಪ್ರಶ್ನೆ ಎದ್ದಿದೆ. ಇದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು ನೋಡಿ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ನಮ್ಮದೇ ನಂದಿನಿ ಬ್ರ್ಯಾಂಡ್ ಬಿಟ್ಟು ಗುಜರಾತ್ ನ ಅಮೂಲ್ ಬ್ರ್ಯಾಂಡ್ ಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದರು. ಈ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸೇವ್ ನಂದಿನಿ ಅಭಿಯಾನವನ್ನೇ ಮಾಡಿದ್ದರು. ಸ್ವತಃ ರಾಹುಲ್ ಗಾಂಧಿ ಕೂಡಾ ಇದಕ್ಕೆ ಸಾಥ್ ನೀಡಿದ್ದರು.
ಆದರೆ ಈಗ ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಂದಿನಿ ಬದಲು ಅಮೂಲ್ ಔಟ್ ಲೆಟ್ ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ವ್ಯಂಗ್ಯ ಮಾಡಿದೆ. ಅಂದು ಸೇವ್ ನಂದಿನಿ ಎಂದು ಅಧಿಕಾರಕ್ಕೆ ಬಂದವರೇ ಈಗ ನಂದಿನಿಗೆ ಕೈಕೊಟ್ಟಿದ್ದಾರೆ ಎಂದು ವ್ಯಂಗ್ಯ ಮಾಡಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾ ರೆಡ್ಡಿ ಮೆಟ್ರೋ ಇರುವುದು ಕೇಂದ್ರ ಸರ್ಕಾರದ ಅಧೀನದಲ್ಲಿ. ಅಲ್ಲಿ ಅಮೂಲ್ ಗೆ ಆದ್ಯತೆ ಕೊಡುತ್ತಿರುವುದು ನಾವಲ್ಲ. ನಾವು ಯಾವತ್ತಿದ್ದರೂ ನಂದಿನಿ ಪರವಾಗಿಯೇ ಇರೋದು. ಇದನ್ನು ಟೀಕೆ ಮಾಡ್ತಿರುವ ಜೆಡಿಎಸ್ ನವರು, ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.