Publish Date: Sat, 09 Nov 2024 (15:17 IST)
Updated Date: Sat, 09 Nov 2024 (15:19 IST)
ಬೆಂಗಳೂರು: ಕೃಷಿ ಜಮೀನು, ಸ್ಮಶಾನ, ದೇವಸ್ಥಾನಗಳು, ಮಠ-ಮಾನ್ಯಗಳು, ಕೆರೆಗಳು ಎಲ್ಲಕ್ಕೂ ನೋಟಿಸ್ ನೀಡಿದ್ದಾಯ್ತು, ಈಗ ನಾಡಪ್ರಭು ಕೆಂಪೇಗೌಡರು ಕಟ್ಟಿದ ನಮ್ಮೆಲ್ಲರ ಹೆಮ್ಮೆಯ ಬೆಂಗಳೂರು ನಗರದ ಮೇಲೆ ವಕ್ಫ್ ಬೋರ್ಡ್ ನ ವಕ್ರದೃಷ್ಟಿ ಬಿದ್ದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ನಮ್ಮ ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಬಳೆ ಪೇಟೆ, ಕಾಟನ್ ಪೇಟೆ ಕೂಡಾ ನಮ್ಮದೇ ಆಸ್ತಿ ಎಂದು ವಕ್ಫ್ ಬೋರ್ಡ್ ಹೇಳುತ್ತಿದೆ.
ಸಿಎಂ ಸಿದ್ದರಾಮಯ್ಯನವರೇ, ವಕ್ಫ್ ಆಸ್ತಿ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ದಿನಕಳೆದಂತೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಇದಕ್ಕೆ ಆದಷ್ಟು ಬೇಗ ಲಗಾಮು ಹಾಕದಿದ್ದರೆ ಜನ ದಂಗೆ ಎದ್ದು ದೊಡ್ಡ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುವುದು ನಿಶ್ಚಿತ.
ಈ ಕೂಡಲೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ. ವಕ್ಫ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಿ.