Publish Date: Fri, 04 Mar 2022 (20:30 IST)
Updated Date: Fri, 04 Mar 2022 (20:33 IST)
ಕಳೆದ ಸಲ ಕೇಂದ್ರ ಸರ್ಕಾರ ಕೋವಿಡ್ ಕಾರಣದಿಂದ ಶೇ.4ರ ಪ್ರಮಾಣದಲ್ಲಿ ಸಾಲ ಪಡೆಯಲು ಅವಕಾಶ ಕೊಟ್ಟಿತ್ತು, ಅದರ ಪ್ರಕಾರ 67,100 ಕೋಟಿ ಸಾಲ ಪಡೆಯಲು ಅವಕಾಶ ಇತ್ತು, ಆದರೆ ನಾವು 63,100 ಕೋಟಿ ರೂ. ಸಾಲ ಪಡೆದೆವು, 4 ಸಾವಿರ ಕೋಟಿ ಸಾಲ ಪಡೆಯದೇ ಆರ್ಥಿಕ ಶಿಸ್ತು ಕಾಪಾಡಿದ್ದೇವೆ, ಈ ಸಲವೂ ಪೂರ್ಣ ಪ್ರಮಾಣದಲ್ಲಿ ಸಾಲ ಪಡೆಯಲ್ಲ, ಶೇ.3.26ರ ಮಿತಿಯಲ್ಲಿ ಸಾಲ ಪಡೆಯುತ್ತೇವೆ, 4 ಸಾವಿರ ಕೋಟಿ ರೂ. ಸಾಲ ಪಡೆಯದ ಮಿತಿಗೆ ಒಳಪಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಆದಾಯ ಕೊರತೆ ನಡುವೆಯೂ ಕಳೆದ ಬಾರಿಗಿಂತ ಹೆಚ್ಚಿನ ಮೊತ್ತದ ಬಜೆಟ್ ಮಂಡಿಸಿದ್ದು, ಈ ಬಾರಿ ಭರವಸೆ ಈಡೇರುವ ಬಜೆಟ್ ಅನ್ನೇ ಮಂಡಿಸಿದ್ದೇನೆ, ಮುಂದಿನ ವರ್ಷದ ಮಾರ್ಚ್ನಲ್ಲಿ ನಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವ ಬಗ್ಗೆ ಉತ್ತರ ಕೊಡಲಿದ್ದೇನೆ. ಎಲ್ಲರನ್ನು ಒಳಗೊಂಡ ಭರವಸೆಯ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಬಗೆಗಿನ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.
ಬಜೆಟ್ ಮಂಡನೆ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದೆರಡು ವರ್ಷದಲ್ಲಿ ಆರ್ಥಿಕತೆಗೆ ಪೆಟ್ಟು ನೀಡಿದ ಕೊರೊನಾ, ನೈಸರ್ಗಿಕ ವಿಕೋಪಗಳಿಂದ ಆರ್ಥಿಕ ಹಿನ್ನಡೆ, 2021-22ರ ಅವಧಿ ಬಳಿಕ ಸರ್ಕಾರದ ಕ್ರಮಗಳಿಂದ ಆರ್ಥಿಕ ಚೇತರಿಕೆ ರಾಜಸ್ವ ಸಂಗ್ರಹ, ಸ್ವೀಕೃತಿಗಳು ನಮ್ಮ ಗುರಿ ಮುಟ್ಟಲಿವೆ. 2022-23ರ ಬಜೆಟ್ ಗಾತ್ರ 2,65,720 ಕೋಟಿ ಆಗಿದೆ. 19,513 ಕೋಟಿ ರೂ. ಗಾತ್ರ ಹೆಚ್ಚಳ, 2006ರಿಂದ ಆದಾಯ ಕೊರತೆ ಇತ್ತು. ಕಳೆದ ಬಾರಿ ಆದಾಯ ಕೊರತೆ 15,134 ಕೋಟಿ ರೂ. ಇತ್ತು, ಈ ಬಾರಿ 14,699 ಕೋಟಿ ರೂ. ಆದಾಯ ಕೊರತೆ ಇದೆ, ಈ ಸಲ ಆದಾಯ ಕೊರತೆ ಪ್ರಮಾಣ 430 ಕೋಟಿ ಕಡಿಮೆಯಾಗಿದೆ, ಇದು ಉತ್ತಮ ಹಣಕಾಸು ನಿರ್ವಹಣೆಯಾಗಿದೆ ಎಂದು ತಿಳಿಸಿದರು.