Publish Date: Thu, 24 Sep 2015 (13:34 IST)
Updated Date: Thu, 24 Sep 2015 (13:37 IST)
ಗಣೇಶೋತ್ಸವದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಮಲ್ಲಿಕಾರ್ಜುನ್ ಎಂಬ ಯುವಕನ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನನ್ನ ಮಗನನ್ನು ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ಹತ್ಯೆಗೈಯ್ಯಲಾಗಿದೆ ಎಂದು ಮೃತನ ತಾಯಿ ಭೀಮಾಬಾಯಿ ಅವರು ಇಂದು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗನನ್ನು ಆತನ ಕಾಲೇಜಿನ ಸಂಗಡಿಗರೇ ದೂರವಾಣಿ ಕರೆ ಮಾಡಿ ಗಣೇಶನನ್ನು ನೀರಿಗೆ ಬಿಡುವ ವಿಚಾರ ಪ್ರಸ್ತಾಪಿಸಿ ಕರೆಸಿಕೊಂಡು ಬಳಿಕ ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅಥವಾ ಪೊಲೀಸ್ ಇಲಾಖೆ ತಮಗೆ ಸೂಕ್ತ ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸಿಕೊಡಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇನ್ನು ಮೃತ ಮಲ್ಲಿಕಾರ್ಜುನ್ ನಗರದ ಶಹಬಜಾರ್ ನಿವಾಸಿಯಾಗಿದ್ದ ಕಾರಣ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗಣೇಶನನ್ನು ನೀರಿಗೆ ಬಿಡಲೆಂದು ಆಗಮಿಸಿದ್ದರು. ಈ ವೇಳೆ ನಗರದ ಶರಣಬಸವೇಶ್ವರ ಉದ್ಯಾನದ ಪಕ್ಕದ ಕೆರೆಗೆ ಗಣೇಶ ಮೂರ್ತಿಯನ್ನು ತಂದು ವಿಸರ್ಜಿಸಲು ಮುಂದಾಗಿದ್ದರು. ಇದಕ್ಕೆ ಮಲ್ಲಿಕಾರ್ಜುನ್ ಕೂಡ ಕೈ ಜೋಡಿಸಿ ನೀರಿಗಿಳಿದು ಗಣೇಶನನ್ನು ಮುಳುಗಿಸಲು ಸಾಥ್ ನೀಡಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿದ್ದ ಮಲ್ಲಿಕಾರ್ಜುನ್ ತರುವಾಯ ಶವವಾಗಿ ಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತಪಡಿಸಿರುವ ಮೃತನ ತಾಯಿ ಭೀಮಾಬಾಯಿ, ತನ್ನ ಮಗನನ್ನು ಆತನ ಸಂಗಡಿಗರೇ ಸೇರಿ ಪೂರ್ವ ನಿಯೋಜಿತ ಸಂಚು ರೂಪಿಸಿ ಹತ್ಯೆ ಗೈದಿದ್ದಾರೆ ಎಂದು ಆರೋಪಿಸಿದ್ದಾರೆ.